
ನವದೆಹಲಿ: ಉದ್ಯೋಗದ ಆಸೆಗೆ ವಿದೇಶಕ್ಕೆ ತೆರಳಿ ವಂಚನೆಗೊಳಗಾಗಿದ್ದ 28 ಕನ್ನಡಿಗರನ್ನು ವಿದೇಶಾಣ್ಗ ಸಚಿವಾಲಯ ರಕ್ಷಣೆ ಮಾಡಿ ದೇಶಕ್ಕೆ ಕರೆತಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದ ವಿದೇಶದಲ್ಲಿ ಕೆಲಸದ ಆಫರ್ ನಂಬಿ 283 ಭಾರತೀಯರು ವಿದೇಶಕ್ಕೆ ಹೋಗಿ ವಂಚನೆಗೆ ಒಳಗಾಗಿದ್ದರು. ಉದ್ಯೋಗ ಕೊಡಿಸುವ ಭರವಸೆ ನೀಡಿ 283 ಭಾರತೀಯರನ್ನು ಥೈಲ್ಯಾಂಡ್ ಗೆ ಕರೆಸಿಕೊಳ್ಳಲಾಗಿತ್ತು. ಹೀಗೆ ಥೈಲ್ಯಾಂಡ್ ಗೆ ತೆರಳಿದ್ದ ಭಾರತೀಯರನ್ನು ರಸ್ತೆ ಮಾರ್ಗವಾಗಿ ಮಯನ್ಮಾರ್ ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪಾಸ್ ಪೋರ್ಟ್ ಗಳನ್ನು ಕಿತ್ತುಕೊಂಡು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದರು.
ದಿನಕ್ಕೆ 15 ಗಂಟೆಗೂ ಅಧಿಕ ಕಾಲ ಕೆಲಸ ಮಾಡಿಸಲಾಗುತ್ತಿತ್ತು. ಈ ವಿಷಯ ವಿದೇಶಾಂಗ ಸಚಿವಾಲಯದ ಗಮನಕ್ಕೆ ಬಂದ ಬಳಿಕ ವಂಚನೆಗೊಳಗಾಗಿದ್ದ ಭಾರತೀಯರನ್ನು ಗುರುತಿಸಿ ಥೈಲ್ಯಾಂಡ್ ರಾಯಭಾರ ಕಚೇರಿ ಮೂಲಕ ಭಾರತಕ್ಕೆ ವಾಪಸ್ ಕರೆತರಲಾಗಿದೆ.
283 ಭಾರತೀಯರು ಮಯನ್ಮಾರ್ ನಿಂದ ದೆಹಲಿಗೆ ಆಗಮಿಸಿದ್ದು, ಅವರಲ್ಲಿ ನಾಲ್ವರು ಮಹಿಳೆಯರು ಸೇರಿ 28 ಕನ್ನಡಿಗರಿದ್ದಾರೆ. 28 ಕನ್ನಡಿಗರನ್ನು ದೆಹಲಿ ಕರ್ನಾಟಕ ಭವನ ಅಧಿಕಾರಿಗಳು ಇಂದಿರಾಗಾಂಧಿ ವಿಮಾನ ನಿಲ್ದಾಣದ ಮೂಲಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಿದ್ದಾರೆ.