ಮಂಗಳೂರು: ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ವಿಧಾನ ಪರಿಷತ್ ಸದಸ್ಯ ಸ್ಥಾನದ ಉಪ ಚುನಾವಣೆ ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಂತಿಯುತವಾಗಿ ನಡೆದಿದೆ.
ಅಂತಿಮವಾಗಿ ಶೇಕಡ 97.91ರಷ್ಟು ಮತದಾನ ಆಗಿದೆ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಒಟ್ಟು 6032 ಮತದಾರರಿದ್ದು, 5906 ಮಂದಿ ಮತದಾನ ಮಾಡಿದ್ದಾರೆ.
392 ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ, ಎಸ್ಡಿಪಿಐ ಅಭ್ಯರ್ಥಿಯಾಗಿ ಅನ್ವರ್ ಸಾದತ್, ಸ್ವತಂತ್ರ ಅಭ್ಯರ್ಥಿಯಾಗಿ ದಿನಕರ್ ಉಳ್ಳಾಲ ಸ್ಪರ್ಧಿಸಿದ್ದು, ಅವರ ಭವಿಷ್ಯವನ್ನು ಮತದಾರರು ನಿರ್ಣಯಿಸಿದ್ದಾರೆ. ಅ. 24ರಂದು ಮತ ಎಣಿಕೆ ನಡೆಯಲಿದೆ.