
ಮಥುರಾ: ಮಥುರಾದ ಬೃಂದಾವನದಲ್ಲಿರುವ ಬಂಕಿ ಬಿಹಾರಿ ದೇವಾಲಯದಲ್ಲಿ ಮುಸ್ಲಿಂ ಕುಶಲಕರ್ಮಿಗಳು ತಯಾರಿಸಿದ ವಸ್ತ್ರಗಳನ್ನು ದೇವರಿಗೆ ಬಳಕೆ ಮಾಡುವುದನ್ನು ನಿಲ್ಲಿಸಬೇಕೆಂಬ ಬೇಡಿಕೆಯನ್ನು ದೇವಾಲಯದ ಅರ್ಚಕರು ತಿರಸ್ಕರಿಸಿದ್ದಾರೆ.
ದೇವಾಲಯದ ಸಂಪ್ರದಾಯಗಳಲ್ಲಿ ಧಾರ್ಮಿಕ ತಾರತಮ್ಯಕ್ಕೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ. ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ಸಂಘರ್ಷ ಸಮಿತಿ ನ್ಯಾಸ್ ನಾಯಕ ದಿನೇಶ್ ಶರ್ಮಾ ಅವರು ದೇವಾಲಯವು ಮುಸ್ಲಿಂ ಕುಶಲಕರ್ಮಿಗಳ ಸೇವೆ ತಪ್ಪಿಸಬೇಕು. ಕೃಷ್ಣನ ವೇಷಭೂಷಣಗಳನ್ನು ಧಾರ್ಮಿಕ ಶುದ್ಧತೆ ಪಾಲಿಸುವವರು ಮಾತ್ರ ತಯಾರಿಸಬೇಕು ಎಂದು ದೇವಾಲಯದ ಅರ್ಚಕರಿಗೆ ಪತ್ರ ಬರೆದು ಆಗ್ರಹಿಸಿದ್ದರು.
ಆದರೆ, ವೇಷ ಭೂಷಣ, ಕಿರೀಟ ಇತರೆ ಕೆಲಸ ಸೇರಿದಂತೆ ಶೇಕಡ 80ರಷ್ಟು ಕೆಲಸಗಳು ನುರಿತ ಮುಸ್ಲಿಮರಿಂದ ನಡೆಯುತ್ತವೆ. ಇತರೆ ಸಮುದಾಯಗಳು ಈ ರೀತಿಯ ವೇಷಭೂಷಣಗಳನ್ನು ತಯಾರಿಸುವಲ್ಲಿ ಅಷ್ಟರಮಟ್ಟಿಗೆ ನಿಪುಣತೆ ಹೊಂದಿಲ್ಲ. ಬೃಂದಾವನದ ಕೃಷ್ಣನಿಗೆ ಮುಸ್ಲಿಮರು ತಯಾರಿಸಿದ ವಸ್ತ್ರವನ್ನೇ ಬಳಕೆ ಮಾಡಲಾಗುವುದು ಎಂದು ಅರ್ಚಕರು ಹೇಳಿದ್ದಾರೆ.