
80ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಮಿಂಚಿದ ನಟಿ ರೂಪಿಣಿ ಆರ್ಥಿಕ ವಂಚನೆಗೆ ಬಲಿಯಾಗಿದ್ದಾರೆ. ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಏರ್ಪಡಿಸುವುದಾಗಿ ಸರವಣನ್ ಎಂಬ ವ್ಯಕ್ತಿ ರೂಪಿಣಿಗೆ ಟೋಪಿ ಹಾಕಿದ್ದಾನೆ.
ರಜನಿಕಾಂತ್, ಕಮಲ್ ಹಾಸನ್ ಅವರಂತಹ ಸ್ಟಾರ್ ನಟರ ಜೊತೆ ಮಿಂಚಿದ ರೂಪಿಣಿ, ಮೋಹನ್ ಎಂಬವರನ್ನು ಮದುವೆಯಾಗಿ ಮುಂಬೈನಲ್ಲಿ ನೆಲೆಸಿದ್ದಾರೆ. ಆದರೂ, ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಇವರು ತಿರುಪತಿ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆಯುವುದನ್ನ ಅಭ್ಯಾಸ ಮಾಡಿಕೊಂಡಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಸರವಣನ್ ಎಂಬ ವ್ಯಕ್ತಿ, ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಏರ್ಪಡಿಸುವುದಾಗಿ ರೂಪಿಣಿಗೆ ಹೇಳಿದ್ದಾನೆ. ಸೆಲೆಬ್ರಿಟಿಗಳ ಜೊತೆಗಿನ ಫೋಟೋಗಳನ್ನ ತೋರಿಸಿ ನಂಬಿಸಿದ್ದಾನೆ. ರೂಪಿಣಿ ಆರಂಭದಲ್ಲಿ 77,000 ರೂ. ಪಾವತಿಸಿದ್ದಾರೆ. ನಂತರ 1.5 ಲಕ್ಷ ರೂ. ಪಡೆದುಕೊಂಡು, ಸುಗಮ ಮತ್ತು ವಿಶೇಷ ದರ್ಶನದ ಭರವಸೆ ನೀಡಿದ್ದಾನೆ.
ಆದರೆ, ಸರವಣನ್ ಮಾಯವಾಗಿದ್ದಾನೆ, ರೂಪಿಣಿ ಮೋಸ ಹೋಗಿದ್ದಾರೆ. ರೂಪಿಣಿ ಪದೇ ಪದೇ ಪ್ರಯತ್ನಿಸಿದರೂ ಸರವಣನ್ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ನಟಿ ರೂಪಿಣಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.