
ಮಂಗಳೂರು: ಉಳ್ಳಾಲದ ತೊಕ್ಕೊಟ್ಟು ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಕಳೆದ ಮೂರು ವರ್ಷಗಳಿಂದ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಗೆ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಬಹುಮಾನ ಬಂದಿದೆ.
ಮೊಹಿದ್ದೀನ್ ಕುಟ್ಟಿ ಅವರಿಗೆ ಲಾಟರಿ ಖರೀದಿಸುವ ಹವ್ಯಾಸವಿದ್ದು, ಅವರು ಸಾಲ ಮಾಡಿ ಖರೀದಿಸಿದ್ದ ಲಾಟರಿ ಏಪ್ರಿಲ್ 4 ರಂದು ಡ್ರಾ ಆಗಿದೆ. ಮೊಹಿದ್ದೀನ್ ಅವರಿಗೆ ಬಹುಮಾನ ಬಂದಿದೆ. ಅವರು 500 ರೂಪಾಯಿ ಸಾಲ ಪಡೆದು ಉಪ್ಪಳಕ್ಕೆ ತೆರಳಿ ಲಾಟರಿ ಖರೀದಿಸಿದ್ದರು. ಅನೇಕ ವರ್ಷಗಳಿಂದ ಲಾಟರಿ ಖರೀದಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಅವರಿಗೆ ಕೊನೆಗೂ ಅದೃಷ್ಟ ಒಲಿದು ಬಂದಿದೆ.
ಮೊಹಿದ್ದೀನ್ ಅವರಿಗೆ ಇದಕ್ಕಿಂತ ಮೊದಲು ಕೂಡ ಲಾಟರಿಯಲ್ಲಿ ಬಹುಮಾನ ಬಂದಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರಿಗೆ 1988 ರಲ್ಲಿ ದುಬೈ ಮೂಲದ ಲಾಟರಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಬಂದಿದೆ. ಅದರಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿದ್ದಾರೆ. ಈಗ ಅವರಿಗೆ ಮತ್ತೆ 1 ಕೋಟಿ ರೂಪಾಯಿ ಬಹುಮಾನ ಬಂದಿದೆ.