ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಓರ್ವನನ್ನ ಕೊಯಮತ್ತೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನ ಸುರೇಂದ್ರನ್ ಒಮ್ಮೆ ಸ್ಫೋಟದ ಆರೋಪಿ ಶಾರೀಕ್ನೊಂದಿಗೆ ಉಳಿದುಕೊಂಡಿದ್ದ ಮತ್ತು ಶಾರೀಕ್ ಸಿಮ್ ಕಾರ್ಡ್ ಪಡೆಯಲು ತನ್ನ ಆಧಾರ್ ಕಾರ್ಡ್ ಅನ್ನು ಸಹ ನೀಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನೀಲಗಿರಿ ಮೂಲದ ಸುರೇಂದ್ರನ್ ಕೊಯಮತ್ತೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ. ನಾವು ಪ್ರಕರಣದ ತನಿಖೆ ಮಾಡಿದ್ದೇವೆ ಮತ್ತು ಸುರೇಂದ್ರನ್, ಶಾರೀಕ್ ನೊಂದಿಗೆ ಉಳಿದುಕೊಂಡಿರುವ ಸಂದರ್ಭಗಳನ್ನು ಪರಿಶೀಲಿಸಿದ್ದೇವೆ. ಸುರೇಂದ್ರನ್ ನಿರಪರಾಧಿ ಎಂದು ತೋರುತ್ತಿದೆ. ನಾವು ಮಾಹಿತಿಯನ್ನು ಮಂಗಳೂರು ಪೊಲೀಸರೊಂದಿಗೆ ಹಂಚಿಕೊಂಡಿದ್ದೇವೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ಪ್ರಕರಣವನ್ನು ಪೊಲೀಸರು ಭಯೋತ್ಪಾದಕ ಕೃತ್ಯ ಎಂದು ದೃಢಪಡಿಸಿದ್ದಾರೆ ಮತ್ತು ಘಟನೆಯನ್ನು ಕೇಂದ್ರ ಏಜೆನ್ಸಿಗಳೊಂದಿಗೆ ತನಿಖೆ ನಡೆಸುತ್ತಿದ್ದಾರೆ.
ಶಾರೀಕ್ ಶನಿವಾರ ಸ್ಫೋಟಕ್ಕೂ ಮೊದಲು ಕೊಯಮತ್ತೂರು, ಮಧುರೈ, ನಾಗರ್ಕೋಯಿಲ್ ಮತ್ತು ಆಲುವಾ (ಕೇರಳ) ಕ್ಕೆ ಭೇಟಿ ನೀಡಿದ್ದ. ಕೊಯಮತ್ತೂರಿನಿಂದ ಪಾಲಕ್ಕಾಡ್ ಮಾರ್ಗದ ಬದಲು ಕೇರಳಕ್ಕೆ ಹೋಗಲು ಮಧುರೈ, ಕನ್ಯಾಕುಮಾರಿ ಮಾರ್ಗದಲ್ಲಿ ಶಾರೀಕ್ ಹೋಗಿದ್ದೇಕೆ ಎಂಬ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಕೊಯಮತ್ತೂರು ಪೊಲೀಸ್ ಮುಖ್ಯಸ್ಥ ವಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಕಾರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಜಮೀಶಾ ಮುಬಿನ್ ಅವರನ್ನು ಭೇಟಿಯಾಗಿದ್ದನಾ ಅಥವಾ ಸಂಪರ್ಕ ಹೊಂದಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.