ಅತ್ಯಾಚಾರದ ಆರೋಪದಿಂದ ಖುಲಾಸೆಗೊಂಡ ನಂತರ, ಮಧ್ಯಪ್ರದೇಶದ ರತ್ಲಾಮ್ನ ವ್ಯಕ್ತಿಯೊಬ್ಬರು ರಾಜ್ಯ ಸರ್ಕಾರದಿಂದ 10 ಸಾವಿರ ಕೋಟಿಗೂ ಹೆಚ್ಚು ಪರಿಹಾರ ಕೇಳಿದ್ದಾರೆ. ಪ್ರಕರಣದಲ್ಲಿ ತನಗಾದ ಹಿಂಸೆ ಮತ್ತು ಮತ್ತು ಮಾನಸಿಕ ಸಂಕಟ ವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದಿಂದ 10,000 ಕೋಟಿಗೂ ಹೆಚ್ಚು ಪರಿಹಾರವನ್ನು ಕೋರಿದ್ದಾರೆ. ತನ್ನ ಸೆರೆವಾಸದಿಂದ ತನ್ನ ಕುಟುಂಬವನ್ನು ಹಸಿವಿನ ಅಂಚಿಗೆ ತಳ್ಳಲಾಗಿತ್ತು ಎಂದು ಕಾಂತಿಲಾಲ್ ಭೀಲ್ ಎಂಬ ವ್ಯಕ್ತಿ ಆರೋಪಿಸಿ ಪರಿಹಾರ ಮೊತ್ತ ಕೇಳಿದ್ದಾರೆ.
ಅಕ್ಟೋಬರ್ 20, 2022 ರಂದು ಸ್ಥಳೀಯ ನ್ಯಾಯಾಲಯವು ಸಾಮೂಹಿಕ ಅತ್ಯಾಚಾರದ ಆರೋಪವನ್ನು ಕೈಬಿಟ್ಟ ನಂತರ ಕಾಂತು, ಅಲಿಯಾಸ್ ಕಾಂತಿಲಾಲ್ ಭೀಲ್ (35) ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿದರು ಎಂದು ಅವರ ವಕೀಲ ವಿಜಯ್ ಸಿಂಗ್ ಯಾದವ್ ಹೇಳಿದ್ದಾರೆ. ಮಧ್ಯಪ್ರದೇಶ ಸರ್ಕಾರ ಮತ್ತು ತನಿಖಾಧಿಕಾರಿಗಳ ವಿರುದ್ಧ ಅವರ ಪ್ರಕರಣದ ವಿಚಾರಣೆ ಜನವರಿ 10 ರಂದು ನಡೆಯಲಿದೆ.
ಅಪಾರ ಪರಿಹಾರದ ಕುರಿತು ಕೇಳಲಾದ ಪ್ರಶ್ನೆಗೆ, ಮಾನವ ಜೀವ ಅಮೂಲ್ಯ ಎಂಬ ಕಾರಣಕ್ಕಾಗಿ 10,000 ಕೋಟಿ ರೂ. ಕೇಳಲಾಗಿದೆ ಎಂದು ವಿಜಯ್ ಸಿಂಗ್ ಯಾದವ್ ಹೇಳಿದರು.
ಡಿಸೆಂಬರ್ 23, 2020 ರಂದು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದಾಗ ಅವರ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದರು ಎಂದು ಕಾಂತಿಲಾಲ್ ಭೀಲ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಅತ್ಯಾಚಾರದ ನಕಲಿ ಆರೋಪಗಳಿಂದಾಗಿ ತನಗೆ ಮತ್ತು ಅವರ ಕುಟುಂಬಕ್ಕೆ ನೋವು ಮತ್ತು ಮಾನಸಿಕ ಸಂಕಟವನ್ನು ಉಲ್ಲೇಖಿಸಿ 10,006.02 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ .
ಜುಲೈ 20, 2018 ರಂದು ಮಹಿಳೆಯೊಬ್ಬರು ಭೀಲ್ ವಿರುದ್ಧ ಮಾನಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಸಹೋದರನ ಮನೆಗೆ ಬಿಡುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ಮೇರೆಗೆ ಭೀಲ್ನ ಬಂಧನವಾಗಿ ಸುಮಾರು ಎರಡು ವರ್ಷಗಳ ಕಾಲ ಸೆರೆವಾಸ ಶಿಕ್ಷೆ ಅನುಭವಿಸಬೇಕಾಯಿತು.