
ಮಲೆನಾಡಿನ ತವರಾದ ಶಿವಮೊಗ್ಗದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ.
ಸೊರಬ ತಾಲ್ಲೂಕಿನ ಗುಡವಿ ಪಕ್ಷಿಧಾಮ, ಚಂದ್ರಗುತ್ತಿ ರೇಣುಕಾಂಬ ದೇವಾಲಯ ನೋಡಬಹುದಾದ ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ. ಗುಡವಿ ಪಕ್ಷಿಧಾಮ ಸಾಗರ –ಸೊರಬ ಮಾರ್ಗದಲ್ಲಿ ಇಲ್ಲವೇ ಶಿರಸಿ –ಬನವಾಸಿ –ಸೊರಬ ಮಾರ್ಗದಲ್ಲಿ ತಲುಪಬಹುದು.
ಗುಡವಿ ಪಕ್ಷಿಧಾಮ ರಾಜ್ಯದ ಪ್ರಮುಖ ಪಕ್ಷಿಧಾಮಗಳಲ್ಲಿ ಒಂದಾಗಿದೆ. ಇಲ್ಲಿಗೆ ಮಳೆಗಾಲ ಆರಂಭವಾದ ಬಳಿಕ 200 ಕ್ಕೂ ಅಧಿಕ ಹಕ್ಕಿಗಳು ವಲಸೆ ಬರುತ್ತವೆ.
ಹೀಗೆ ವಲಸೆ ಬಂದ ಹಕ್ಕಿಗಳು ಸಂತಾನಾಭಿವೃದ್ಧಿ ಬಳಿಕ ಹೋಗುತ್ತವೆ. ಜೂನ್ ನಿಂದ ಡಿಸೆಂಬರ್ ವರೆಗೆ ಗುಡವಿಯಲ್ಲಿ ಪಕ್ಷಿಗಳ ಕಲರವ ಕೇಳಬಹುದು. ಬಾನಾಡಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇನ್ನು ಸೊರಬ ತಾಲ್ಲೂಕಿನಲ್ಲಿರುವ ಮತ್ತೊಂದು ಪ್ರಮುಖ ತಾಣ ಚಂದ್ರಗುತ್ತಿ ರೇಣುಕಾಂಬ ದೇವಾಲಯ ಮತ್ತು ಬೆಟ್ಟದ ಮೇಲಿನ ಪುರಾತನವಾದ ಕೋಟೆ.
ಪರಶುರಾಮ, ನಾಗ ದೇವಾಲಯಗಳು ಎತ್ತರವಾದ ಬೆಟ್ಟ, ಹೆಜ್ಜೆಯ ಆಕಾರದ ಕೊಳ ಫಿರಂಗಿಗಳು ಗಮನ ಸೆಳೆಯುತ್ತವೆ. ಚಂದ್ರಗುತ್ತಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಸುತ್ತಮುತ್ತ ಇನ್ನೂ ಹಲವು ನೋಡಬಹುದಾದ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.