
ನವದೆಹಲಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ಅಂಚಿಗೆ ಬಂದಿದೆ. 30 ಮಂದಿ ಶಿವಸೇನೆ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಸೂರತ್ ಗೆ ತೆರಳಿದ್ದಾರೆ.
ಅಸಮಾಧಾನಿತ ಶಾಸಕರೊಂದಿಗೆ ಉದ್ಧವ್ ಠಾಕ್ರೆ ಸಂಧಾನ ವಿಫಲವಾಗಿದ್ದು, ಬಿಜೆಪಿ ಸರ್ಕಾರ ರಚನೆಗೆ ತೆರೆಮರೆಯ ತಂತ್ರ ರೂಪಿಸಿದೆ. ಸೂರತ್ ನಲ್ಲಿರುವ ಶಿವಸೇನೆ ಶಾಸಕರನ್ನು ಮಹಾರಾಷ್ಟ್ರ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಭೇಟಿಯಾಗಿ ಚರ್ಚಿಸಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದು ಶಿವಸೇನೆ ಶಾಸಕರು ಒತ್ತಡ ಹೇರಿ ಬಂಡಾಯ ಸಾರಿದ್ದಾರೆ. ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಕಡಿದುಕೊಳ್ಳಬೇಕೆಂದು ಶಾಸಕರು ಪಟ್ಟುಹಿಡಿದಿದ್ದಾರೆ.
288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 144 ಮತಗಳು ಬೇಕಿದೆ. ಶಿವಸೇನೆಯ 56, ಎನ್ಸಿಪಿ 53, ಕಾಂಗ್ರೆಸ್ 44 ಸ್ಥಾನ ಹೊಂದಿದೆ. ಬಿಜೆಪಿ 106 ಶಾಸಕರಿದ್ದು, ಒಂದು ಸ್ಥಾನ ಖಾಲಿ ಉಳಿದಿದೆ. 30 ಶಾಸಕರು ಬಂಡಾಯ ಎದ್ದಿರುವುದರಿಂದ ಮಹಾ ವಿಕಾಸ ಮೈತ್ರಿಕೂಟದ ಬಲ 122ಕ್ಕೆ ಇಳಿದಿದೆ.