
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಗ್ಗಿಸಲು ನಿರ್ಬಂಧ ಮುಂದುವರಿಕೆ ಅಗತ್ಯವೆಂಬ ಅಭಿಮತ ಕೇಳಿಬಂದಿದ್ದು, ರಾಜ್ಯದಲ್ಲಿ ಮೇ 24 ರ ನಂತರವೂ ಲಾಕ್ಡೌನ್ ಮುಂದುವರೆಯಲಿದೆ ಎನ್ನಲಾಗಿದೆ.
ಲಾಕ್ಡೌನ್ ವಿಸ್ತರಣೆ ಬಗ್ಗೆ ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆಯಲಾಗುತ್ತಿದೆ. ಮೇ 24 ರ ನಂತರವೂ ಲಾಕ್ಡೌನ್ ಮುಂದುವರಿಸುವ ಕುರಿತು ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಲಾಕ್ಡೌನ್ ವಿಸ್ತರಣೆ ಅಗತ್ಯವೆಂದು ಹೇಳಿದ್ದಾರೆ. ರಾಜ್ಯದಲ್ಲಿ ಜನತಾ ಕರ್ಫ್ಯೂ, ಕಠಿಣ ನಿರ್ಬಂಧ ಹೊರತಾಗಿಯೂ ಕೊರೋನಾ ಇಳಿಮುಖವಾಗುತ್ತಿಲ್ಲ. ಬೆಡ್, ಆಮ್ಲಜನಕ, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದ್ದು, ಮೇ 24 ರ ನಂತರವೂ ಲಾಕ್ಡೌನ್ ಮುಂದುವರಿಯಬಹುದು ಎಂದು ಹೇಳಲಾಗಿದೆ.