
ಬೆಂಗಳೂರು: ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ರಜೆ ಅವಧಿಯಲ್ಲಿ ಕೊರೋನಾ ಕಾರ್ಯಕ್ಕಾಗಿ ನಿಯೋಜಿತರಾಗಿದ್ದ ಶಿಕ್ಷಕರಿಗೆ BLO ಗಳ ಮಾದರಿಯಲ್ಲಿ ಗಳಿಕೆ ರಜೆ ಮಂಜೂರು ಮಾಡಲಾಗುವುದು ಎಂದು ಹೇಳಲಾಗಿದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಕೆಲವರನ್ನು ರಜೆ ಅವಧಿಯಲ್ಲಿ ಕೊರೋನಾ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಕೆಸಿಎಸ್ಆರ್ ನಿಯಮಗಳ ಪ್ರಕಾರ, ಗಳಿಕೆ ರಜೆ ಮಂಜೂರು ಮಾಡಲು ಅವಕಾಶವಿದ್ದು, ಅಂತೆಯೇ ರಜೆ ಅವಧಿಯಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ರಜೆ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪತ್ರ ಬರೆದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.