![](https://kannadadunia.com/wp-content/uploads/2023/02/iStock-466838548.jpg)
ಕೊಡಗು: ಪ್ರವಾಸಿಗರ ನೆಚ್ಚಿನ ತಾಣ ಮಡಿಕೇರಿಯಲ್ಲಿ ಇನ್ಮುಂದೆ ನೀರಿನ ಬಾಟಲ್ ಗಳು ಸಿಗಲ್ಲ. ಪ್ಲಾಸ್ಟಿಕ್ ಬಾಟಲ್ ಗಳ ಸಮಸ್ಯೆ ನಿವಾರಣೆಗಾಗಿ ಮಡಿಕೇರಿ ನಗರ ಸಭೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಡಿಕೇರಿಯಲ್ಲಿ ಪ್ಸಾಸ್ಟಿಕ್ ನೀರಿನ ಬಾಟಲ್ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಿದೆ.
ಮಡಿಕೇರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರಾಂತ್ಯ ಶುರುವಾಯಿತೆಂದರೆ ದೂರದೂರುಗಳಿಂದ ಬರುವ ಪ್ರವಾಸಿಗರ ಸಂಖ್ಯೆಗೆ ಲೆಕ್ಕವೇ ಇಲ್ಲ. ಹೀಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ನೀರಿನ ಬಾಟಲ್ ಗಳನ್ನು ತರುತ್ತಾರೆ. ಇಲ್ಲವೇ ಸ್ಥಳೀಯವಾಗಿ ಮಾರಾಟವಾಗುವ ನೀರಿನ ಬಾಟಲ್ ಗಳನ್ನು ಖರೀದಿಸಿ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ.
ಮಡಿಕೇರಿಯಲ್ಲಿ ಕಸ ವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿಲ್ಲ ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಿದೆ. ಅಲ್ಲದೇ ಪ್ರವಾಸಿಗರು ಎಲ್ಲೆಂದರಲ್ಲಿ ಬಿಸಾಕುವ ಪ್ಲಾಸ್ಟಿಕ್ ಬಾಟಲ್ ಗಳನ್ನು ಸಾವಿರಾರು ಕೆಜಿಗಳಷ್ಟು ಸಂಗ್ರಹಿಸಿ ಅವುಗಳನ್ನು ಬೆಟ್ಟದ ಮೇಲೆ ಡಂಪ್ ಮಡಲಾಗುತ್ತಿದೆ. ಹೀಗೆ ಡಂಪ್ ಮಾಡಿದ ಪ್ಲಾಸ್ಟಿಕ್ ಬಾಟಲ್ ಗಳು ಬೆಟ್ಟಗಳ ಮೇಲೆ ಟನ್ ಗಟ್ಟಲೇ ಸಂಗ್ರಹವಾಗಿದೆ. ಈ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿಪಡೆಯಲು ಮಡಿಕೇರಿ ನಗರ ಸಭೆ ಮಡಿಕೇರಿಯಲ್ಲಿ ಎರಡು ಲೀಟರ್ ಪ್ಲಾಸ್ಟಿಕ್ ವಾಟರ್ ಬಾಟಲ್ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ನಗರದ ವ್ಯಾಪಾರಸ್ಥರು, ಹೋಂ ಸ್ಟೇ, ರೆಸಾರ್ಟ್ ಮಾಲೀಕರು, ಕಲ್ಯಾಣ ಮಂಟಪಗಳ ಜೊತೆ ನಗರಸಭೆ ಸಭೆ ನಡೆಸಿ ಮನವೊಲಿಸಿದೆ. ಪ್ಲಾಸ್ಟಿಕ್ ಬಾಟಲ್ ಗಳ ಮಾರಾಟ, ಬಳಕೆ ನಿಷೇಧಿಸಲಾಗಿದೆ. ಮಡಿಕೇರಿ ನಗರದಲ್ಲಿ ಮೂರು ಕಡೆ ಜಲಶುದ್ಧೀಕರಣ ಘಟಕಗಳಿದ್ದು, ಅಲ್ಲಿ 1 ರೂಪಾಯಿ ಹಾಗೂ 5 ರೂಪಾಯಿ ಹಾಕಿದರೆ ಬೇಕಾದಷ್ಟು ಕುಡಿಯುವ ನೀರು ದೊರೆಯುತ್ತದೆ. ಅಲ್ಲದೇ ನಗರದ ಹಲವೆಡೆ ವಾಟರ್ ಫಿಲ್ಟರ್ ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.