![](https://kannadadunia.com/wp-content/uploads/2018/10/beluru-1524116211.jpg)
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಮತ್ತು ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಮಾನಸ ಪುತ್ರರು ಎಂದು ಹೇಳಿಕೊಂಡು ಓಡಾಡುತ್ತಿದ್ದವರೆ ತಿರುಗಿ ಬಿದ್ದಿದ್ದಾರೆ. ಬಹುತೇಕ ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲವೆಂದು ಅಸಮಾಧಾನಗೊಂಡು ಗುಪ್ತಸಭೆಗಳನ್ನು ನಡೆಸಿದ್ದು ಶೀಘ್ರವೇ ಅಸಮಾಧಾನ ಸ್ಫೋಟಗೊಳ್ಳಲಿದೆ. ಮುಂದಿನ 6 ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಕುರ್ಚಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಜನ ಬೇಸತ್ತಿದ್ದು, ಆಡಳಿತ ಪಕ್ಷದ ಶಾಸಕರು ಕೂಡ ಅಸಮಾಧಾನಗೊಂಡಿದ್ದಾರೆ. ಯಡಿಯೂರಪ್ಪನವರ ಕೈಯಲ್ಲಿ ಅಧಿಕಾರವಿಲ್ಲ. ಅವರ ಪುತ್ರನ ಕೈಯಲ್ಲಿ ಅಧಿಕಾರವಿದ್ದು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಪುತ್ರನ ಮೂಲಕ ಸರ್ಕಾರದ ಕೆಲಸಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ನಾನು ಭವಿಷ್ಯ ಹೇಳುತ್ತಿಲ್ಲ, ಭವಿಷ್ಯ ಹೇಳಲು ನಾನು ಕೋಡಿಮಠದ ಸ್ವಾಮೀಜಿ ಅಲ್ಲ. ಇದು ವಾಸ್ತವ ಎಂದು ಹೇಳಿದ್ದಾರೆ.
ಹೆಚ್. ವಿಶ್ವನಾಥ್ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದು ಈಗ ವಿಧಾನಪರಿಷತ್ ಸದಸ್ಯರಾಗಲು ಹೊರಟಿದ್ದಾರೆ. ಪಕ್ಷಕ್ಕೆ ಚೂರಿ ಹಾಕಿ ಹೋದ ಫಲವನ್ನು ಅವರು ಉಣ್ಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.