ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸಲಾಗದೆ ಬಡ ಮತ್ತು ಮಧ್ಯಮ ವರ್ಗದ ಜನತೆ ಹೈರಾಣಾಗಿದ್ದಾರೆ. ಇದರ ಮಧ್ಯೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆ ಅಡಿ ನೋಂದಾಯಿಸಿಕೊಂಡು ಕಾರ್ಡ್ ಪಡೆದವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ.
‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಕಾರ್ಡ್ ಹೊಂದಿರುವ ಸೋಂಕಿತರಿಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ತಿಳಿಸಿದ್ದು, ಬಿಬಿಎಂಪಿ ವ್ಯಾಪ್ತಿಯ ಸಿಎಚ್ ಬಿಎಂಎಸ್ ಪೋರ್ಟಲ್ ಮೂಲಕ ಹಾಗೂ ಇತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ರೆಫರಲ್ ಮೂಲಕ ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.
ಇನ್ನು ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಕಾರ್ಡ್ ಹೊಂದಿದ್ದರೂ ಸಹ ರೆಫರಲ್ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಅಂಥವರು ಜನರಲ್ ವಾರ್ಡಿಗೆ 10 ಸಾವಿರ ರೂಪಾಯಿ, ಎಚ್ಡಿಯು ವಾರ್ಡಿಗೆ 12 ಸಾವಿರ ರೂಪಾಯಿ, ಐಸೋಲೇಶನ್ ಐಸಿಯುಗೆ 15 ಸಾವಿರ ರೂಪಾಯಿ ಹಾಗೂ ವೆಂಟಿಲೇಶನ್ ಸಹಿತ ಐಸೋಲೇಶನ್ ಐಸಿಯುಗೆ 25 ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಇದನ್ನು ರೋಗಿಗಳೇ ಭರಿಸಬೇಕಿದೆ.