
ಕಲಬುರಗಿ: ಶಾಲಾ ವಾಹನ ಹರಿದು ಮನೆ ಮುಂದೆ ಆಟವಾಡುತ್ತಿದ್ದ ಮಗು ಸಾವನ್ನಪ್ಪಿದೆ. ಕಲಬುರಗಿಯ ಸಂಗಮೇಶ್ವರ ಕಾಲೋನಿಯಲ್ಲಿ ಘಟನೆ ನಡೆದಿದೆ.
ಆಕ್ರೋಶಗೊಂಡ ಜನ ಶಾಲಾ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಗಾಜುಗಳು ಪುಡಿಪುಡಿಯಾಗಿವೆ. ಸಂಜೆ ಶಾಲೆಯಿಂದ ಮಕ್ಕಳನ್ನು ಮನೆಗೆ ಬಿಡಲು ಬಂದಾಗ ಘಟನೆ ನಡೆದಿದೆ. ಎರಡು ವರ್ಷದ ಪುಟ್ಟ ಕಂದ ಮನೋಜ್ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದ್ದು, ಅಪಘಾತದ ನಂತರ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ಜಪ್ತಿ ಮಾಡಿದ್ದಾರೆ.