
ಬೆಂಗಳೂರು: ಕೊರೋನಾ ಕಾರಣದಿಂದ ಸ್ಥಗಿತವಾಗಿದ್ದ ಜನಸೇವಕ ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ಕೈಗೊಂಡಿದೆ.
53 ಸೇವೆಗಳನ್ನು ಮನೆಬಾಗಿಲಲ್ಲೇ ನೀಡುವ ಜನಸೇವಕ ಯೋಜನೆಯನ್ನು ಮತ್ತೆ ಆರಂಭಿಸಲಾಗುವುದು. ಕಾಲ ಮಿತಿಯೊಳಗೆ ಸೇವೆ ನೀಡಲು ವಾರ್ಡಿಗೆ ಒಬ್ಬರು ಜನ ಸೇವಕರನ್ನು ನೇಮಕ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಸೇವೆ ಪಡೆಯಬಯಸುವ ಹೆಸರು ನೋಂದಾಯಿಸಿಕೊಂಡವರ ಮನೆಬಾಗಿಲಿಗೆ ಜನಸೇವಕ ಯೋಜನೆ ತಲುಪಿಸಲಾಗುವುದು.
ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯೋಜನೆ ಆರಂಭವಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೋನಾ ಕಾರಣದಿಂದ ಸೇವೆ ನಿಲ್ಲಿಸಲಾಗಿತ್ತು. ಯೋಜನೆಯಡಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ಮನೆಬಾಗಿಲಲ್ಲೇ ಸೇವೆ ಒದಗಿಸಲಾಗುತ್ತದೆ.
ಆದಾಯ, ಜಾತಿ ಪ್ರಮಾಣ ಪತ್ರ, ಪಿಂಚಣಿ, ಖಾತೆ ಬದಲಾವಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ಸೇವೆಗಳು ಮನೆಬಾಗಿಲಲ್ಲೇ ದೊರೆಯಲಿವೆ. ಮುಂದಿನ ದಿನಗಳಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಹಲವು ಸೇವೆಗಳನ್ನು ಇದು ಒಳಗೊಳ್ಳಲಿದೆ ಎಂದು ಹೇಳಲಾಗಿದೆ.