![](https://kannadadunia.com/wp-content/uploads/2020/07/hug_a_tree.jpg)
ಕೊರೋನಾ ವೈರಸ್ ವಿಶ್ವಾದ್ಯಂತ ಮಾನವರ ಸಾಮಾನ್ಯ ಪ್ರಕ್ರಿಯೆಗಳಿಗೂ ತಡೆಯೊಡ್ಡಿದೆ. ರೋಗ ಬಾರದೇ ಇರಲು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಿದೆ. ಇದರಿಂದ ತಾಯಿ ತನ್ನ ಮಗುವನ್ನು, ಅಜ್ಜ, ಅಜ್ಜಿ ತಮ್ಮ ಮೊಮ್ಮಕ್ಕಳನ್ನು, ಪ್ರಿಯತಮ ತನ್ನ ಮನದನ್ನೆಯನ್ನು…..ಹೀಗೆ ತಮ್ಮ ಪ್ರೀತಿ ಪಾತ್ರರಿಗೆ ಒಂದು ಬಿಸಿ ಅಪ್ಪುಗೆ ನೀಡಿ ಪ್ರೀತಿ, ಸ್ನೇಹ, ಹಂಚಿಕೊಳ್ಳಲೂ ಆಗುತ್ತಿಲ್ಲ.
ಇದರಿಂದ ಜನ ಬೇಸರಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಡಿಪ್ರೆಶನ್ ಗೆ ಒಳಗಾಗುಗುತ್ತಿದ್ದಾರೆ. ಇದನ್ನು ತಪ್ಪಿಸಲು ಇಸ್ರೇಲ್ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ.
ಪಾರ್ಕ್ ಗಳಲ್ಲಿ ಮರವನ್ನು ಅಪ್ಪಿಕೊಳ್ಳಿ ಎಂದು ಸೂಚಿಸಿದೆ. ಬಾರ್ಬರ್ ಗ್ರ್ಯಾಂಟ್ ಎಂಬುವವರು ನೀಡಿದ
ಸಲಹೆ ಮೇರೆಗೆ ಇಸ್ರೇಲ್ ಸರ್ಕಾರದ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರದಿಂದ ಜನರನ್ನು ಉದ್ಯಾನಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.”ಸ್ಪರ್ಷ ಮತ್ತು ಅಪ್ಪುಗೆ ಎಂಬುದು ಮನುಷ್ಯನ ಮೂಲ ಅವಶ್ಯಕತೆಯಾಗಿದೆ” ಎಂದು ಗ್ರ್ಯಾಂಟ್ ಅಭಿಪ್ರಾಯ.
ಅಪ್ಪುಗೆ ಯೋಜನೆ ಸಾಕಷ್ಟು ಜನರಿಗೆ ಸಮಾಧಾನ ತಂದಿದ್ದು, ಈಗಾಗಲೇ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. “ನಾವು ನಮ್ಮ ಮಕ್ಕಳು- ಮೊಮ್ಮಕ್ಕಳನ್ನು ಅಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಮರದ ಅಪ್ಪುಗೆ ಖುಷಿ, ಸಮಾಧಾನ ಸಿಗುತ್ತಿದೆ” ಎಂದು ಮೋಶೇ ಹಜಾನ್ ತಿಳಿಸಿದ್ದಾರೆ.
ರೈಟರ್ಸ್ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಲಾಗಿದೆ. “ಅಹ್ಲಾದಕರ ಪ್ರಕೃತಿಯಲ್ಲಿ ದೀರ್ಘ ಉಸಿರು ಪಡೆಯಿರಿ ಹಾಗೂ ಮರವನ್ನು ಅಪ್ಪಿಕೊಳ್ಳಿ ನಿಮ್ಮ ಪ್ರೀತಿ ವ್ಯಕ್ತಪಡಿಸಿ” ಎಂದು ಅಪೊಲೊನಿಯಾ ನ್ಯಾಷನಲ್ ಪಾರ್ಕ್ ನ ಮಾರ್ಕೆಟಿಂಗ್ ಡೈರೆಕ್ಟರ್ ಓರಿಟ್ ಸ್ಟ್ಯಾನಿಫೀಲ್ಡ್ ಎಂಬುವವರು ವಿಶ್ವದ ಜನರಿಗೆ ಸಲಹೆ ನೀಡಿದ್ದಾರೆ. ಅಂದಹಾಗೆ ಇಸ್ರೇಲ್ ನಲ್ಲಿ 40 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳಿದ್ದು, 365 ಸಾವು ಸಂಭವಿಸಿದೆ. 19395 ಜನರು ಗುಣಮುಖರಾಗಿದ್ದಾರೆ.