ತುಮಕೂರು : ರಾಜ್ಯದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪಾಪಿ ಮಗ ಹಾಗೂ ಆತನ ಹೆಂಡತಿ (ಸೊಸೆ) 11 ತಿಂಗಳು ಹೆತ್ತತಾಯಿಯನ್ನೇ ಗೃಹಬಂಧನದಲ್ಲಿಟ್ಟು ಹಿಂಸೆ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಮಗ ಸುರೇಶ್ ಹಾಗೂ ಆತನ ಪತ್ನಿ ಆಶಾ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಆಸ್ತಿಗಾಗಿ ವೃದ್ದೆ ಪಂಕಜರನ್ನು 11 ತಿಂಗಳಿನಿಂದ ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಶಿರಾಗೇಟ್ ನಲ್ಲಿರುವ ಸಾಂಡೇಪುರದಲ್ಲಿ ಈ ಘಟನೆ ನಡೆದಿದೆ.
ವಿಚಾರ ತಿಳಿದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ವೃದ್ದೆಯನ್ನು ರಕ್ಷಿಸಿ ಸಾಂತ್ಬನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಕೋಣೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೋಣೆಯ ತುಂಬೆಲ್ಲಾ ಕಸದ ರಾಶಿ ಬಿದ್ದಿತ್ತು. ಇಂತಹ ಗಲೀಜಾದ ಸ್ಥಳದಲ್ಲಿ ಮಗ ತನ್ನ ತಾಯಿಯನ್ನು ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದನು. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗ-ಸೊಸೆಯ ಕೃತ್ಯಕ್ಕೆ ಛೀಮಾರಿ ಹಾಕಿದ್ದಾರೆ.
ಕಳೆದ ತಿಂಗಳು ಮಗಳು ತನ್ನ ತಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು, ಕಾರಿನಲ್ಲಿ ತನ್ನ ಗಂಡನೊಂದಿಗೆ ವೃದ್ದೆ ತಾಯಿಯನ್ನು ಕರೆದುಕೊಂಡ ಬಂದ ಮಗಳು ನಡುರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಪರಾರಿಯಾಗಿದ್ದಳು. ಈ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.