
ಕೊರೊನಾ ವಿರುದ್ಧ ಭಾರತದ ಹೋರಾಟವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ಬಗ್ಗೆ ಚರ್ಚೆಯಾಗ್ತಿದೆ. ಕೊರೊನಾ ಲಸಿಕೆ ಭಾರತದ ಪ್ರತಿಯೊಬ್ಬರಿಗೆ ಸಿಗಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಯಾರೂ ಲಸಿಕೆಯಿಂದ ವಂಚಿತರಾಗುವುದಿಲ್ಲವೆಂದು ಮೋದಿ ಹೇಳಿದ್ದಾರೆ.
ಕೊರೊನಾ ಬಗ್ಗೆ ಮಾತನಾಡಿದ ಮೋದಿ, ದೇಶದ ಜನರ ಸಹಾಯದಿಂದ ಸರ್ಕಾರ ತೆಗೆದುಕೊಂಡ ನಿರ್ಧಾರ ಅನೇಕರ ಜೀವ ಉಳಿಸಿದೆ. ಲಾಕ್ ಡೌನ್ ಹಾಗೂ ಅನ್ಲಾಕ್ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಕೊರೊನಾ ಮಧ್ಯೆ ಭಾರತದ ಆರ್ಥಿಕತೆಯನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳು ಇಡೀ ಪ್ರಪಂಚದ ಗಮನ ಸೆಳೆದಿದೆ ಎಂದಿದ್ದಾರೆ. ಪ್ರಪಂಚದ ಅನೇಕ ದೇಶಗಳು ಈಗ ಭಾರತದ ಮಾರುಕಟ್ಟೆಯನ್ನು ಅವಲಂಬಿಸಿವೆ. ಹೂಡಿಕೆಗೆ ಹೆಚ್ಚು ಆದ್ಯತೆಯ ತಾಣವಾಗಲು ಸಿದ್ಧವಾಗಿದೆ. ಸರಿಯಾದ ಸಮಯದಲ್ಲಿ ಲಾಕ್ಡೌನ್ ಮಾಡಿದ ಪರಿಣಾಮ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಯ್ತು ಎಂದು ಪಿಎಂ ಹೇಳಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂದ್ರೆ ಮೈಮರೆಯುವ ಸಮಯವಲ್ಲ. ಕೊರೊನಾ ಹೊಡೆದೋಡಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಕೊರೊನಾ ಹೊಡೆದೋಡಿಸಲು ಬೇಕಾದ ವಸ್ತುಗಳನ್ನು ಬಳಸಬೇಕೆಂದು ಮೋದಿ ಹೇಳಿದ್ದಾರೆ.