
ಬೆಳಗಾವಿ: ದ್ವೇಷ ಭಾಷಣಗಳನ್ನು ತಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಲಪಂಥೀಯ ಕಾರ್ಯಕರ್ತರ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ.
ಈ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪರಿಷತ್ ನಲ್ಲಿ ಈ ವಿಷಯವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದು, ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಹಿಂದುತ್ವವಾದಿಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಆದರೂ ಸರ್ಕಾರ ಬಲಪಂಥೀಯ ಕಾರ್ಯಕರ್ತರು ನೀಡುವ ಹೇಳಿಕೆಗಳ ಮೇಲೆ ನಿಗಾ ವಹಿಸಲಿದೆ ಎಂದು ಸಚಿವರು ತಿಳಿಸಿದರು.
ಚಕ್ರವರ್ತಿ ಸೂಲಿಬೆಲೆಯಂತವರ ಭಾಷಣಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಆದರೆ ಚಕ್ರವರ್ತಿ ಸೂಲಿಬೆಲೆ ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ್ದಾರೆ. ಅವರ ವಿರುದ್ಧ ಕೋಮು ಗಲಭೆಯಂತಹ ಪ್ರಕರಣ ಹಾಕಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಬಿಜೆಪಿಯ ಮುನಿರಾಜುಗೌಡ ಕಿಡಿಕಾರಿದರು.
ಇದನ್ನು ತಳ್ಳಿಹಾಕಿದ ಸಚಿವ ಪರಮೇಶ್ವರ್, ದ್ವೇಷ ಭಾಷಣಗಳನ್ನು ತಡೆಯಲು ಸರ್ಕಾರ ಕೇವಲ ನಿಗಾ ವಹಿಸಿದೆ ಅಷ್ಟೇ. ಭಾಷಣಗಳು ಸಮಾಜದಲ್ಲಿ ಸಂಘರ್ಷವನ್ನು ಉಂಟುಮಾಡುವ ವಿಷಯಗಳನ್ನು ಹೊಂದಿದ್ದರೆ ಮಾತ್ರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.