ಬೆಂಗಳೂರು : ಬಾಡಿಗೆ ಮನೆಯಲ್ಲಿ ಇರೋರಿಗೆ ವಿದ್ಯುತ್ ಫ್ರೀ ( free electrcity) ಉಂಟಾ..? ಹೀಗೊಂದು ಪ್ರಶ್ನೆ ಜನರಲ್ಲಿ ಮೂಡಿದೆ. 200 ಯುನಿಟ್( 200 Unit) ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಬಾಡಿಗೆ ಮನೆಯಲ್ಲಿ ಇರೋರಿಗೆ ವಿದ್ಯುತ್ ಫ್ರೀ ನಾ ಎಂಬ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ವಾಣಿಜ್ಯ ಬಳಕೆದಾರರಿಗೆ ‘ಗೃಹಜ್ಯೋತಿ’ ( Gruha jyothi) ಯೋಜನೆ ಅನ್ವಯಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾಡಿಗೆದಾರರು ಬಿಲ್ ಕಟ್ಟುತ್ತಿದ್ದರೆ ಉಚಿತ ವಿದ್ಯುತ್ ನೀಡುತ್ತೇವೆ. ಒಂದು ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು ಆರ್ಆರ್ ನಂಬರ್ ಹೊಂದಿದ್ದರೆ ಅದನ್ನು ಕಮರ್ಷಿಯಲ್ ಎಂದು ಪರಿಗಣಿಸಲಾಗುತ್ತೆ, ಆದ್ದರಿಂದ ಬಾಡಿಗೆದಾರರಿಗೆ ‘ಗೃಹಜ್ಯೋತಿ’ ಯೋಜನೆಗೆ ಒಳಪಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳು
1 ಗೃಹ ಜ್ಯೋತಿ
200 ಯುನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ಈ ಗ್ಯಾರಂಟಿ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೇವೆ. ಯಾರು ಎಷ್ಟು ವಿದ್ಯುತ್ ಬಳಸುತ್ತಾರೆ ಅಷ್ಟು ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ. 12 ತಿಂಗಳ ಸರಾಸರಿ ಆಧಾರದಲ್ಲಿ ವಿದ್ಯುತ್ ಶುಲ್ಕ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
2 ಗೃಹಲಕ್ಷ್ಮೀ
ಗೃಹ ಲಕ್ಷ್ಮೀ ಯೋಜನೆ ಜಾರಿಗೆ ನಿರ್ಧರಿಸಿದ್ದೇವೆ. ಎಪಿಎಲ್ , ಬಿಪಿಎಲ್ ಸೇರಿದಂತೆ ಪಿಂಚಣಿ, ವಿಧವಾ ವೇತನಾ ಪಡೆಯುತ್ತಿರುವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ. ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಬೇಕು. ಮನೆಯ ಯಜಮಾನಿ ಅಕೌಂಟ್ ಗೆ 2,000 ರೂ. ಜಮೆ ಮಾಡುತ್ತೇವೆ. ಜೂನ್, 15 ರಿಂದ ಜುಲೈ 15 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 15 ರಿಂದ ಆಗಸ್ಟ್ 15 ರವರೆಗೆ ಸಿದ್ದತೆ ಕೈಗೊಂಡು ಆಗಸ್ಟ್ 15 ಕ್ಕೆ ಮನೆಯ ಯಜಮಾನಿ ಅಕೌಂಟ್ ಗೆ 2,000 ರೂ. ಜಮೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
3 ಅನ್ನಭಾಗ್ಯ ಯೋಜನೆ
ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯಗಳನ್ನು 10 ಕೆಜಿ ಕೊಡುತ್ತೇವೆ. ಜುಲೈ 1 ರಿಂದ ಎಲ್ಲಾ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ದಾರರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
4 ಶಕ್ತಿ ಯೋಜನೆ
ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಜೂನ್ 11 ರಿಂದ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ, ರಾಜ್ಯದ ಒಳಗಡೆ ಎಸಿ ಬಸ್ ಗಳನ್ನು ಬಿಟ್ಟು, ಎಲ್ಲಾ ಬಸ್ ಗಳಲ್ಲೂ ಉಚಿತ ಪ್ರಯಾಣ ಮಾಡಬಹುದು.
5 ಯುವನಿಧಿ
ಯುವನಿಧಿ ಯೋಜನೆಯಡಿ 22-23 ರಲ್ಲಿ ವ್ಯಾಸಂಗ ಮಾಡಿದ ಪದವೀಧರರು, ಡಿಪ್ಲೋಮಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3,000 ರೂ. ಡಿಪ್ಲೋಮಾ ಮಾಡಿದವರಿಗೆ 1,500 ರೂ. ಸಹಾಯಧನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.