
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾಜ್ಯ ಸರ್ಕಾರಿ ನೌಕರರ ಸಂಘ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕೆಲ ಭಾಗಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಶೇಷಾದ್ರಿರಸ್ತೆ, ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಎನ್.ಪಿ.ಎಸ್ ಸರ್ಕಾರಿ ನೌಕರರ ಸಂಘದವರು ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಬದಲಿಸುವಂತೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದರಿಂದ, ಸುಗಮ ಸಂಚಾರದ ಹಿತದೃಷ್ಟಿಯಿಂದ ಸೂಕ್ತ ಸಂಚಾರ ಬಂದೋಬಸ್ತ್ ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕರು ಈ ಕೆಳಗಿನ ಪರ್ಯಾಯ ರಸ್ತೆಗಳನ್ನು ಬಳಸಲು ವಿನಂತಿಸಲಾಗಿದೆ.
ಕೆ.ಜಿ.ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲ ತಿರುವು ಪಡೆದು ಫ್ರೀಡಂ ಪಾರ್ಕ್ಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ರಸ್ತೆಯ ಮಹಾರಾಣಿ ಅಂಡರ್ ಪಾಸ್ ಅನ್ನು ಬಳಸಲು ಕೋರಲಾಗಿದೆ.
ಫ್ರೀಡಂ ಪಾರ್ಕ್ ಜಂಕ್ಷನ್ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು ವಾಹನ ಸವಾರರು ಸದರಿ ರಸ್ತೆಯನ್ನು ಬಳಸದಂತೆ ತಿಳಿಸಲಾಗಿದೆ.
ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್ ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರು ಪ್ರೈಓವರ್ ರಸ್ತೆಯಲ್ಲಿ ರೈಲ್ವೆ ನಿಲ್ದಾಣದಿಂದ ಪ್ರತಿಭಟನೆಗೆ ಬರುವಂತ ಜನರು ಕಾಲ್ನಡಿಗೆಯಲ್ಲಿ ಬರುವವರಿದ್ದು ವಾಹನ ಸಂಚಾರ ದಟ್ಟಣೆಯಾದಲ್ಲಿ ವಾಹನ ಸವಾರರು ಹಳೆ ಜೆ.ಡಿ.ಎಸ್ ಕಛೇರಿ ರಸ್ತೆಯನ್ನು ಬಳಸಬೇಕು.
ಸುಬ್ಬಣ್ಣ ಜಂಕ್ಷನ್ನಿಂದ ಎಂ.ಟಿ.ಆರ್ ಜಂಕ್ಷನ್ ಕಡೆಗೆ ಬರುವ ರಸ್ತೆಯು ಹಾಲಿ ಏಕಮುಖ ಸಂಚಾರ ರಸ್ತೆಯಾಗಿದ್ದು ತಾತ್ಕಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು ಗಾಂಧಿನಗರ ಕಡೆಗೆ ಬರುವ ವಾಹನ ಸವಾರರು ಸದರಿ ರಸ್ತೆಯನ್ನು ಬಳಸುವಂತೆ ಕೋರಲಾಗಿದೆ.
ಪ್ರತಿಭಟನಾಕಾರರ ವಾಹನ ನಿಲುಗಡೆಗೆ:
ಪ್ರತಿಭಟನೆಯಲ್ಲಿ ಭಾಗವಹಿಸುವವರು ಅವರ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಫ್ರೀಡಂ ಪಾರ್ಕ್ ಬಳಿರುವ ಎಂ.ಎಲ್.ಸಿ.ಪಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿಕೊಳ್ಳಬಹುದಾಗಿದೆ.
ರಾಜ್ಯದ ನಾನಾ ಭಾಗಗಳಿಂದ ಬಸ್ಸು, ಟಿ.ಟಿ. ವಾಹನಗಳಲ್ಲಿ ಬರುವ ಪ್ರತಿಭಟನಕಾರರು ಫ್ರೀಡಂ ಪಾರ್ಕ್ ಬಳಿ ಇಳಿದುಕೊಂಡು ಅವರ ವಾಹನಗಳ ನಿಲುಗಡೆಗಾಗಿ ತಾತ್ಕಾಲಿಕವಾಗಿ ಕಸ್ತೂರಭಾ ರಸ್ತೆಯಲ್ಲಿರುವ ಕಂಠೀರವ ಸ್ಟೇಡಿಯಂ ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಿಗೆ ತಾತ್ಕಾಲಿಕವಾಗಿ ಮೆಜೆಸ್ಟಿಕ್ ಟರ್ಮಿನಲ್-03 ಬಸ್ ನಿಲ್ದಾಣದ ಬಳಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಕೊಳ್ಳಬಹುದಾಗಿದೆ.
ಈ ಭಾಗದಲ್ಲಿ ಪಾರ್ಕಿಂಗ್ ಅವಕಾಶವಿಲ್ಲ:
ಖೋಡೆಜಂಕ್ಷನ್ ನಿಂದ ಮಹಾರಾಣಿ ಜಂಕ್ಷನ್ ವರೆಗೆ, ವೈ ರಾಮಚಂದ್ರರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ, ಕೆ.ಜಿ ರಸ್ತೆಗಳಲ್ಲಿ ಯಾವುದೇ ಮಾದರಿಯ ವಾಹನಗಳಿಗೆ ಪಾರ್ಕಿಂಗ್ ಗೆ ಅನುಮತಿಸಲಾಗುವುದಿಲ್ಲ.