
ಚಿತ್ರದುರ್ಗ: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ(Cataract) ಶಸ್ತ್ರಚಿಕಿತ್ಸೆ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ.
2024-25ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕಣ್ಣಿನ ಸ್ವಾಸ್ಥ್ಯಕ್ಕಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವಿಶೇಷ ಅಭಿಯಾನ ಯೋಜನೆಯನ್ನು ಆರೋಗ್ಯ ಇಲಾಖೆ ಸಮನ್ವಯದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಇದೇ ಫೆ.24ರಂದು ಹೊಳಲ್ಕೆರೆ ಪಟ್ಟಣದ ಸಂವಿಧಾನದ ಸೌಧ ಪಕ್ಕದ ಉರ್ದು ಶಾಲೆ ಹತ್ತಿರದ ಗುರುಭವನ, ಫೆ.25ರಂದು ಹೊಸದುರ್ಗ ತಾಲ್ಲೂಕು ಆಸ್ಪತ್ರೆ, ಫೆ.28ರಂದು ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಮಾರ್ಚ್ 1 ರಂದು ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಎದುರಿನ ಸರ್ಕಾರಿ ನೌಕರರ ಸಂಘದ ಸಭಾಂಗಣ, ಮಾರ್ಚ್ 3ರಂದು ಚಿತ್ರದುರ್ಗ ಬುದ್ಧನಗರದ ಒನಕೆ ಓಬವ್ವ ಸ್ಟೇಡಿಯಂ ಹತ್ತಿರದ ಜಿಲ್ಲಾ ಬಾಲಭವನ ಆವರಣದ ಜಿಲ್ಲಾ ಬಾಲಭವನ ಸಭಾಂಗಣ, ಮಾರ್ಚ್ 5ರಂದು ಹಿರಿಯೂರು ನೆಹರು ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾ ಭವನದಲ್ಲಿ ಹಿರಿಯ ನಾಗಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ ನಡೆಯಲಿದೆ.
ತಪಾಸಣಾ ಶಿಬಿರಕ್ಕೆ ಹಾಜರಾಗುವ ಹಿರಿಯ ನಾಗರಿಕರು ವಯಸ್ಸಿನ ಸಂಬಂಧ ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಕಾರ್ಡ್. ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಶಾಲಾ-ಕಾಲೇಜು ದಾಖಲಾತಿ ಸೇರಿದಂತೆ ಜನ್ಮ ದಿನಾಂಕ ನಮೂದಾಗಿರುವ ದಾಖಲಾತಿ ಪ್ರತಿ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.