ಮುಂಬೈ: ಎಕ್ಸ್ ಪ್ರೆಸ್ ರೈಲೊಂದು ನಿಗದಿತ ಅವಧಿಗಿಂತ 90 ನಿಮಿಷ ಮೊದಲೇ ನಿಲ್ದಾಣಕ್ಕೆ ಬಂದು 45 ಪ್ರಯಾಣಿಕರನ್ನು ಬಿಟ್ಟು ಹೊರಟ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಸಾಮಾನ್ಯವಾಗಿ ರೈಲುಗಳು ತಡವಾಗಿ ಬಂದು ಸುದ್ದಿಯಾಗುತ್ತವೆ. ಆದರೆ ವಾಸ್ಕೋಡಿಗಾಮಾ-ನಿಜಾಮುದ್ದೀನ್ ಗೋವಾ ಎಕ್ಸ್ ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ರೈಲು ನಿಲ್ದಾಣಕ್ಕೆ ಬಂದು, ಪ್ರಯಾಣಿಕರನ್ನು ಬಿಟ್ಟು ತೆರಳಿದೆ.
ದೆಹಲಿಗೆ ಹೊರಟಿದ್ದ ಗೋವಾ ಎಕ್ಸ್ ಪ್ರೆಸ್ ರೈಲು ಶುಕ್ರವಾಗ ಬೆಳಿಗ್ಗೆ 10:30ಕ್ಕೆ ಮನ್ಮಾಡ್ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಬೆಳಗಾವಿ-ಮೀರಜ್ -ದೌಂಡ್ ಮಾರ್ಗದ ಬದಲಿಗೆ ರೋಹಾ-ಕಲ್ಯಾಣ್-ನಾಸಿಕ್ ಮಾರ್ಗವಾಗಿ ಆಗಮಿಸಿ ರೈಲು ಒಂದುವರೆ ಗಂಟೆ ಮುಂಚಿತವಾಗಿಯೇ ನಿಲ್ದಾಣಕ್ಕೆ ಬಂದಿದೆ. ಬೆಳಿಗ್ಗೆ 9:5ಕ್ಕೆ ಮನ್ಮಾಡ್ ನಿಲ್ದಾಣಕ್ಕೆ ಆಗಮಿಸಿದೆ.
ಕೇವಲ 5 ನಿಮಿಷ ನಿಲುಗಡೆಯಾದ ರೈಲು ಪ್ರಯಾಣ ಮುಂದುವರೆಸಿದೆ. ದೆಹಲಿಗೆ ತೆರಳಲು ಮುಂಗಡ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು 9:45ರ ವೇಳೆಗೆ ನಿಲ್ದಾಣಕ್ಕೆ ಬಂದಿದ್ದಾರೆ. ಆಗಲೇ ರೈಲು ಹೊರಟಿರುವ ಸುದ್ದಿ ತಿಳಿದು ಶಾಕ್ ಆಗಿದ್ದಾರೆ. ನಿಗದಿತ ಸಮಯಕ್ಕೂ ಮೊದಲೇ ರೈಲು ಬಂದು ಹೋಗಿರುವುದಕ್ಕೆ ಸ್ಟೇಷನ್ ಮಾಸ್ಟರ್ ಹಾಗೂ ರೈಲ್ವೆ ಸಿಬ್ಬಂದಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ತಮಗೆ ಪ್ರಯಾಣಕ್ಕೆ ಬೇರೆ ರೈಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಮಧ್ಯಾಹ್ನ 11:26ಕ್ಕೆ ಮನ್ಮಾಡ್ ನಿಲ್ದಾಣಕ್ಕೆ ಬಂದ ಗೀತಾಂಜಲಿ ಎಕ್ಸ್ ಪ್ರೆಸ್ ರೈಲಿನಲ್ಲಿ 45 ಪ್ರಯಾಣಿಕರಿಗೆ ಜಲಗಾಂವ್ ಗೆ ಕಳುಹಿಸಲಾಯಿತು. ನಿಗದಿತ ಸಮಯಕ್ಕಿಂತ ಮೊದಲೇ ಹೊರಟಿದ್ದ ಗೋವಾ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ 1:16ಕ್ಕೆ ಜಲಗಾಂವ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಗೀತಾಂಜಲಿ ಎಕ್ಸ್ ಪ್ರೆಸ್ ರೈಲು ಬರುವವರೆಗೆ ಗೋವಾ ಎಕ್ಸ್ ಪ್ರೆಸ್ ರೈಲು ಸಂಚಾರ ತಡೆ ಹಿಡಿದ ಘಟನೆ ನಡೆದಿದೆ.
ಬಳಿಕ ಮಧ್ಯಾಹ್ನ 1:35ರ ಸುಮಾರಿಗೆ ಗೀತಾಂಜಲಿ ಎಕ್ಸ್ ಪ್ರೆಸ್ ರೈಲು ಜಲಗಾಂವ್ ನಿಲ್ದಾಣಕ್ಕೆ ಬಂದಿದ್ದು, 45 ಪ್ರಯಾಣಿಕರನ್ನು ಗೋವಾ ಎಕ್ಸ್ ಪ್ರೆಸ್ ರೈಲಿಗೆ ಹತ್ತಿಸಲಾಯಿತು. ನಂತರ 1:45ಕ್ಕೆ ಗೋವಾ ಎಕ್ಸ್ ಪ್ರೆಸ್ ದೆಹಲಿಯತ್ತ ಪ್ರಯಾಣ ಮುಂದುವರೆಸಿತು.