
ಇದೇ ವೇಳೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರಾಜ್ಯಪಾಲರು, ಹರಿಯಾಣಾ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳ ಮುಖ್ಯಮಂತ್ರಿಳು ಸೇರಿ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ವರ್ಷದ ಏಪ್ರಿಲ್ 13ರಂದು, ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ 102ನೇ ವರ್ಷದ ಸ್ಮರಣೆ ವೇಳೆ, ಸ್ಮಾರಕವನ್ನು ನವೀಕರಿಸಲು ನಿರ್ಧರಿಸಲಾಗಿತ್ತು. ಜಲಿಯನ್ ವಾಲಾ ಬಾಗ್ ನವೀಕರಣ ಟ್ರಸ್ಟ್ನ ಚೇರ್ಮನ್ ಸಹ ಆಗಿರುವ ಪ್ರಧಾನಿ ಮೋದಿ ಆಗಸ್ಟ್ 28ರಂದು ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
20ನೇ ಶತಮಾನದ ಆರಂಭದಿಂದ 1919ರ ಹತ್ಯಾಕಾಂಡದವರೆಗೂ ಪಂಜಾಬ್ನಲ್ಲಿ ಜರುಗಿದ ಅನೇಕ ಘಟನಾವಳಿಗಳ ಬಗ್ಗೆ ತಿಳಿಸುವ ನಾಲ್ಕು ಹೊಸ ಸಂಗ್ರಹಾಲಯಗಳು, ಹೊಸ ಗ್ಯಾಲರಿಗಳನ್ನು ಸ್ಥಾಪಿಸಲಾಗಿದೆ. ಪ್ರೊಜೆಕ್ಷನ್ ಮ್ಯಾಪಿಂಗ್, 3ಡಿ ನಿರೂಪಣೆ, ಶಿಲ್ಪಕಲಾ ರಚನೆಗಳ ಮೂಲಕ ಇತಿಹಾಸದ ವಿವಿಧ ಘಟನಾವಳಿಗಳ ಬಗ್ಗೆ ಈ ಸಂಗ್ರಹಾಲಯದಲ್ಲಿ ಕಟ್ಟಿಕೊಡಲಾಗಿದೆ.
ಸ್ಮಾರಕದ ಪ್ರವೇಶ ದ್ವಾರಗಳಿಂದ ಹಿಡಿದು, ಆಯಕಟ್ಟಿನ ಜಾಗಗಳಿಗೆ ಪ್ರಖರ ಬೆಳಕಿನ ವ್ಯವಸ್ಥೆ, ಸಸ್ಯೋದ್ಯಾನ, ಆಡಿಯೋ ವಿವರಣೆಗಳು ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸಲಾಗಿದ್ದು, ಪಂಜಾಬ್ನ ಸ್ಥಳೀಯ ಶೈಲಿಯಲ್ಲಿ ಉದ್ಯಾನವನ್ನು ಮರುವಿನ್ಯಾಸಗೊಳಿಸಲಾಗಿದೆ.
ಏಪ್ರಿಲ್ 13, 1919ರ ಆ ರಕ್ತಪಾತದ ದಿನದಂದು ಏನೆಲ್ಲಾ ನಡೆಯಿತು ಎಂದು ಕಣ್ಣಿಗೆ ಕಟ್ಟಿಕೊಡುವಂತೆ ಬೆಳಕು ಮತ್ತು ಧ್ವನಿ ವ್ಯವಸ್ಥೆಯನ್ನೂ ಸಹ ಉದ್ಯಾನದಲ್ಲಿ ಮಾಡಲಾಗಿದೆ.





