
ಬೆಂಗಳೂರು: ಕುಖ್ಯಾತ ಜೂಜುಕೋರ ಎಂ. ಬಾಬು ಬಿನ್ (ಲೇಟ್) ಮುನಿಸ್ವಾಮಿ ವಿರುದ್ಧ ಗೂಂಡಾ ಕಾಯಿದೆ ಜಾರಿ ಮಾಡಿ ಬಂಧಿಸಲಾಗಿದೆ.
ಬೆಂಗಳೂರು ನಗರ ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳು, ಬೆಂಗಳೂರು ನಗರದ ನಿವಾಸಿಯಾದ ಎಂ. ಬಾಬು ಬಿನ್ (ಲೇಟ್) ಮುನಿಸ್ವಾಮಿ (48) ಗೂಂಡಾ ಕಾಯ್ದೆ ಜಾರಿ ಮಾಡುವಂತೆ ಪೊಲಿಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಬಾಬು ಬಿನ್ ನಿರಂತರವಾಗಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂದರ್-ಬಾಹರ್ ಜೂಜಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರ್ಭೀತಿಯಿಂದ ಭಾಗಿಯಾಗುತ್ತಿದ್ದ. ಈತನ ಸಮಾಜಘಾತುಕ ಕಾನೂನು ಬಾಹಿರ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.
ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಿ, ಡಿಸಿಪಿ ಅಪರಾಧ ಹಾಗೂ ಅಪರ ಪೊಲೀಸ್ ಆಯುಕ್ತರು (ಅಪರಾಧಗಳು) ಶಿಫಾರಸ್ಸು ಮಾಡಿದ್ದರು. ಅದರಂತೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಾಬು ಬಿನ್ ನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಶಿವಮೊಗ್ಗದ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದಾರೆ. ಅದರಂತೆ ಗೂಂಡಾ ಕಾಯ್ದೆಯಡಿ ಬಾಬು ಬಿನ್ ನನ್ನು ಬಂಧಿಸಿ ಶಿವಮೊಗ್ಗದ ಕಾರಾಗೃಹಕ್ಕೆ ಆತನನ್ನು ಒಪ್ಪಿಸಲಾಗಿದೆ.