
ತನ್ನ ಇಬ್ಬರು ಮಕ್ಕಳು ಓದಿನಲ್ಲಿ ಹಿಂದಿದ್ದಾರೆಂದು ತಂದೆಯೊಬ್ಬ, ಮಕ್ಕಳಿಬ್ಬರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ತಡೆಪಲ್ಲಿಗುಡೇನಿ ಮೂಲದ ವನಪಲ್ಲಿ ಚಂದ್ರಕಿಶೋರ್ ಸ್ಥಳೀಯ ಒಎನ್ ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದ. ಇಬ್ಬರು ಮಕ್ಕಳ ಬಗ್ಗೆ ತುಂಬಾ ಕನಸು ಹೊತ್ತಿದ್ದರು. ಆದರೆ ಪ್ರತಿಬಾರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಿದ್ದ ಮಕ್ಕಳಿಂದ ಬೇಸರಗೊಂಡಿದ್ದರು. ಕೊನೆಗೆ ಕೆಟ್ಟ ನಿರ್ಧಾರ ಮಾಡಿದ್ದಾರೆ.
ಮಕ್ಕಳು ಕಡಿಮೆ ಅಂಕ ಪಡೆಯುತ್ತಿದ್ದ ಬಗ್ಗೆ ಮನೆಯಲ್ಲಿ ಹಲವು ಬಾರಿ ಗಲಾಟೆಯಾಗಿತ್ತು. ಹೋಳಿ ಸಂದರ್ಭವಾದ್ದರಿಂದ ಪತ್ನಿ ತನುಜಾ ಹಾಗೂ ಇಬ್ಬರು ಮಕ್ಕಳನ್ನು ತನ್ನ ಕಚೇರಿಗೆ ಕರೆತಂದಿದ್ದ ಚಂದ್ರಕಿಶೋರ್ ಬಳಿಕ ಪತ್ನಿಗೆ ಮಕ್ಕಳಿಗೆ ಸಮವಸ್ತ್ರ ಹೊಲಿಸಲು ಟೇಲರ್ ಬಳಿ ಕರೆದುಕೊಂಡು ಹೋಗುತೇನೆ. ನೀನು ಇಲ್ಲಿಯೇ ಇರು ಎಂದು ಹೇಳಿ ಪತ್ನಿಯನ್ನು ಕಚೇರಿಯಲ್ಲಿ ಕೂರಿಸಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬಳಿಕ ಮಕ್ಕಳ ಕೈ-ಕಾಲು ಕಟ್ಟಿಹಾಕಿ, ತಲೆಯನ್ನು ನೀರು ತುಂಬಿದ ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಎಷ್ಟುಹೊತ್ತಾದರೂ ಬಾರದಿದ್ದಾಗಿ ಪತ್ನಿ ಮನೆಗೆ ಬಂದಿದ್ದಾಳೆ. ಮನೆಗೆ ಬಂದು ನೋಡಿದಗಾ ಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವುದನ್ನು ಕಂಡು ಕಂಗಾಲಾಗಿದ್ದಾಳೆ. ಸಾವಿಗೂ ಮುನ್ನ ಚಂದ್ರಕಿಶೋರ್ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಚಂದ್ರಕಿಶೋರ್ ಬರೆದ ಡೆತ್ ನೋಟ್ ನಲ್ಲಿ ಮಕ್ಕಳು ಓದಿನಲ್ಲಿ ಹಿಂದೆ ಇದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರು ಮುಂದೆಬರಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.