alex Certify ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ಕೆಲ ಮಾತ್ರೆ, ಸಿಂಥೆಟಿಕ್ ಡ್ರಗ್ ಮೊರೆ ಹೋಗುತ್ತಿರುವ ಮಾದಕ ವ್ಯಸನಿಗಳು: ಕಠಿಣ ಕ್ರಮಕ್ಕೆ ಸಚಿವ ಪರಮೇಶ್ವರ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ಕೆಲ ಮಾತ್ರೆ, ಸಿಂಥೆಟಿಕ್ ಡ್ರಗ್ ಮೊರೆ ಹೋಗುತ್ತಿರುವ ಮಾದಕ ವ್ಯಸನಿಗಳು: ಕಠಿಣ ಕ್ರಮಕ್ಕೆ ಸಚಿವ ಪರಮೇಶ್ವರ್ ಸೂಚನೆ

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆಯು ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ಬಳಿಕ ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾದಕ ದ್ರವ್ಯ ವ್ಯಸನಿಗಳು ಸಿಂಥೆಟಿಕ್ ಡ್ರಗ್ ಮೊರೆ ಹೋಗುತ್ತಿದ್ದಾರೆ. ಮೆಡಿಕಲ್‌ಗಳಲ್ಲಿ ಸಿಗುವ ಕೆಲ ಮಾತ್ರೆಗಳನ್ನು ಬಳಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಅಂತಹ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ಮಾರಾಟ ಮಾರಾಟಬಾರದು‌.

ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸೂಚಿಸಿದರು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳ ಓದಿಗಾಗಿ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವರಿಗೆ ವಿವಿಧ ವಿಷಯಗಳ ಅವಶ್ಯಕ ಪುಸ್ತಕಗಳನ್ನು ಒದಗಿಸಿ.

ಪೊಲೀಸ್ ಇಲಾಖೆ ಸರ್ಕಾರದ ಮುಖ. ಅಧಿಕಾರಿ ಮತ್ತು ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಿ, ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದರೆ  ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಇಲಾಖೆಯ ಮೇಲೆ ಹೆಚ್ಚು ಜವಾಬ್ಧಾರಿ ಇದೆ.

ಬಡವರ ಪರ ಸರ್ಕಾರ ನಮ್ಮದು.‌ ಸಮಾಜದಲ್ಲಿ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸವಾಗಬೇಕು. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ‌ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು. ಶಿಕ್ಷೆ ಆಗುವ ನಿಟ್ಟಿ‌ಲ್ಲಿ ಕೆಲಸ‌ ಮಾಡಬೇಕು. ಕೊಪ್ಪಳದಲ್ಲಿ ನಡೆದಿದ್ದ ಘಟನೆಯಲ್ಲಿ ಒಂದೇ ಪ್ರಕರಣದಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆಯಾಗಿರುವ ಪ್ರಕರಣವನ್ನು ಮಾದರಿಯಾಗಿ ತೆಗೆದುಕೊಂಡು ಕರ್ತವ್ಯನಿರ್ವಹಿಸಿ.

ಬಹುತೇಕ ಪ್ರಕರಣಗಳು ಬಂದಾಗ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಪೊಲೀಸರು ದೂರುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿದಿನ ಸಾರ್ವಜನಿಕರು ನನ್ನ ಬಳಿಗೆ ದೂರು ತೆಗೆದುಕೊಂಡು ಬರುತ್ತಿದ್ದಾರೆ. ಇದು ಮುಂದುವರಿದರೆ ಸಹಿಸುವುದಿಲ್ಲ. ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಿ, ಜನಸ್ನೇಹಿಯಾಗಿ ಕೆಲಸ ಮಾಡಬೇಕು.

ಶಿವಮೊಗ್ಗ ಪ್ರವಾಸದ್ಯೋಮ ಜಿಲ್ಲೆಯಾಗಿರುವುದರಿಂದ ಸಾಕಷ್ಟು ಜನರು ವಿವಿಧೆಡೆಯಿಂದ ಪ್ರವಾಸಕ್ಕೆ ಬರುತ್ತಾರೆ. ಕಿಡಿಗೇಡಿಗಳು ಪ್ರವಾಸಿಗರಿಗೆ ತೊಂದರೆ ಉಂಟು ಮಾಡುತ್ತಿರುತ್ತಾರೆ. ಈ ಬಗ್ಗೆ ಹೆಚ್ಚು ನಿಗಾವಹಿಸಿ ಬಿಸಿ ಮುಟ್ಟಿಸಬೇಕು. ವಿವಿಧ ಆಚರಣೆಗಳ ಸಂದರ್ಭದಲ್ಲಿ ವಿವಾದಾತ್ಮಕ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ.‌ ಈ ಬಗ್ಗೆ ನಿಗಾವಹಿಸಬೇಕು.   ಸಂಬಂಧಪಟ್ಟವರಿಗೆ ಎಚ್ಚರಿಸಿ ಕ್ರಮ ತೆಗೆದುಕೊಂಡರೆ ವಿವಾದಗಳು ಸೃಷ್ಟಿಯಾಗುವುದಿಲ್ಲ.

ಸೈಬರ್ ಕ್ರೈಂ, ಡ್ರಗ್ಸ್ ಪ್ರಕರಣಗಳು ಪೊಲೀಸ್ ಇಲಾಖೆಗೆ ಸವಲಾಗಿ ಪರಿಣಮಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಿಬ್ಬಂದಿಗಳನ್ನು ನೀಡಿ ಸಿಇಎನ್ ಠಾಣೆಗಳ ಬಲವರ್ಧಿಸಲಾಗುವುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಕೆ.ಸಂಗಮೇಶ್ವರ, ಎಸ್.ಎನ್.ಚೆನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನಪರಿಷತ್ ಸದಸ್ಯರಾದ ಬಲ್ಕೀಶ್ ಭಾನು, ಡಿ.ಎಸ್.ಅರುಣ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಅವರು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...