![](https://kannadadunia.com/wp-content/uploads/2024/01/MB-patel.jpg)
ಬೆಂಗಳೂರು : ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಬಸವತತ್ವಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಮಾಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬಸವಾದಿ ಪ್ರಮಥರ ತತ್ವವಿಚಾರಗಳು ವಚನಗಳಾಗಿ ಮೂಡಿಬಂದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿವೆ. ಅತ್ಯಂತ ಅಮೂಲ್ಯವಾದ ವಚನ ಸಾಹಿತ್ಯವನ್ನು ಸಂಗ್ರಹಿಸುವ, ಸಂರಕ್ಷಿಸುವ ಕಾರ್ಯವನ್ನು ಬೆಂಗಳೂರಿನ ಡಾ. ಫ.ಗು.ಹಟ್ಟಿ ಸಂಶೋಧನಾ ಕೇಂದ್ರ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಂದ ತಾಳೆಗರಿ, ಹಸ್ತಪ್ರತಿಗಳನ್ನು ಪತ್ತೆ ಮಾಡಿ, ಅಧ್ಯಯನ ನಡೆಸಿ ಅವುಗಳನ್ನು ವೈಜ್ಞಾನಿಕವಾಗಿ ಕಾಪಾಡುವ, ಹಾಗೂ ಡಿಜಿಟಲೀಕರಣವನ್ನು ಸಂಸ್ಥೆ ಮಾಡುತ್ತಿದೆ. ಇದರ ಜತೆ ಜತೆಗೆ ಶರಣ ಸಾಹಿತ್ಯ ಸಂಬಂಧಿಸಿದಂತೆ ನೂತನವಾಗಿ ಸುಮಾರು 3000 ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ನಾಡೋಜ ಶ್ರೀ ಗೊ.ರು. ಚನ್ನಬಸಪ್ಪ, ಹಿರಿಯ ಸಾಹಿತಿಗಳಾದ ಡಾ. ಸಿದ್ದರಾಮಯ್ಯ ಮೊದಲಾದವರೊಂದಿಗೆ ಬೆಂಗಳೂರಿನ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ನಿನ್ನೆ ಭೇಟಿನೀಡಿ, ಅಲ್ಲಿನ ಕಾರ್ಯಗಳನ್ನು ಪರಿಶೀಲಿಸಿ, ಮೆಚ್ಚುಗೆ ಸೂಚಿಸಿದ್ದಾರೆ.