
ಮಹಾರಾಷ್ಟ್ರದ ಬಾರಾಮತಿಯಲ್ಲಿ ವೈದ್ಯರು ಕ್ಲಿನಿಕ್ ಬಾಗಿಲು ತೆರೆದಿದ್ದು ತಡವಾಗಿದ್ದಕ್ಕೆ ಆ ಡಾಕ್ಟರ್ ಮತ್ತು ಅವರ ಮಗನನ್ನು ಜನರ ಗುಂಪೊಂದು ಥಳಿಸಿದೆ.
ಹಲ್ಲೆ ನಡೆಸಿರುವ ಸಂದರ್ಭ ಸಿಸಿ ಟಿವಿ ದೃಶ್ಯಗಳಲ್ಲಿ ಬಹಿರಂಗವಾಗಿದೆ. ಸಂಗಾವಿಯಲ್ಲಿರುವ ಯುವರಾಜ್ ಗಾಯಕ್ವಾಡ್ ಅವರ ಚಿಕಿತ್ಸಾಲಯದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಕುಟುಂಬದೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಕೆಲವರು ಬಾಗಿಲು ಜೋರಾಗಿ ತಟ್ಟಿದ್ದಾರೆ. ಊಟ ಮಾಡುತ್ತಿದ್ದರಿಂದ ಬಾಗಿಲು ತೆರೆಯಲು ವಿಳಂಬವಾಯಿತು. ಅಲ್ಲಿಗೆ ಬಂದ ಕೆಲವರು ಕಿಟಕಿಯ ಗಾಜು ಒಡೆದರು ಎಂದು ವೈದ್ಯರು ದೂರಿನಲ್ಲಿ ವಿವರಿಸಿದ್ದಾರೆ.
ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜಿತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್ ಎಂಬ ವ್ಯಕ್ತಿಗಳು ವೆೈದ್ಯರ ಮನೆಗೆ ಬಲವಂತವಾಗಿ ನುಗ್ಗಿ ಅವರನ್ನು ಥಳಿಸಲು ಪ್ರಾರಂಭಿಸಿದರು.
ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ವೈದ್ಯರ ಮಗನನ್ನು ಸಹ ಕೋಣೆಯಿಂದ ಹೊರಗೆ ಎಳೆದುಕೊಂಡು ಹಲ್ಲೆ ಮಾಡಲು ಪ್ರಾರಂಭಿಸುವುದನ್ನು ಸಹ ಕಾಣಬಹುದು. ಮುಂದಿನ ಕೋಣೆಯಿಂದ, ಇಬ್ಬರು ಮಹಿಳೆಯರು ಘಟನೆಯನ್ನು ವೀಕ್ಷಿಸುತ್ತಾರೆ ಮತ್ತು ಅವರಲ್ಲಿ ಒಬ್ಬರು ಫೋಟೋವನ್ನು ತೆಗೆದುಕೊಳ್ಳುತ್ತಾರೆ.
ಈ ಸಂಬಂಧ ಮಾಲೆಗಾಂವ್ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ.