
ರಾಯಚೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ರಣ ಬಿಸಿಲ ಹೊಡೆತಕ್ಕೆ ಜನರು ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನರಿಗೆ ಕೆಲ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ.
ರಾಯಚೂರಿನಲ್ಲಿ ಮಾತನಡಿದ ಸಚಿವ ದಿನೇಶ್ ಗುಂಡೂರಾವ್, ಮಧ್ಯಾಹ್ನ 12ರಿಂದ 3ಗಂಟೆಯವರೆಗೆ ಮನೆಯಿಂದ, ಕಚೇರಿಗಳಿಂದ ಹೊರಬರಬೇಡಿ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ಇನ್ನು ಮಧ್ಯಾಹ್ನದ ಸಮಯದಲ್ಲಿ ಅಧಿಕಾರಿಗಳು ಫೀಲ್ಡ್ ವಿಸಿಟ್ ಮಾಡುವುದನ್ನು ನಿಲ್ಲಿಸಿ. ಮಧ್ಯಾಹ್ನ 12ರಿಂದ 3ಗಂಟೆ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳು ಹೊರಗಡೆ ಬರುವುದು ಬೇಡ. ಬೆಳಗಿನ ಸಮಯದಲ್ಲಿ ಅಥವಾ ಸಾಯಂಕಾಲ ಫೀಲ್ಡ್ ವಿಸಿಟ್ ಮಾಡಬೇಕು ಎಂದರು.
ರಾಯಚೂರು ಸೇರಿದಂತೆ ಈ ಭಗದಲ್ಲಿ 43ರಿಂದ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಮನೆಯೊಳಗೆ, ಕಚೇರಿಯೊಳಗೆ, ಶಾಲೆಯೊಳಗೆ ಇರುವಂತೆ ಸಂಬಂಧಪಟ್ಟ ಸಂಸ್ಥೆಗಳು ನೋಡಿಕೊಳ್ಳಬೇಕು. ಆಗಾಗ ನೀರು ಸೇವಿಸುತ್ತಿರಬೇಕು. ಇದರಿಂದ ನಿರ್ಜಲೀಕರಣ ಸಮಸ್ಯೆ ತಪ್ಪಿಸಬಹುದು ಎಂದು ತಿಳಿಸಿದರು.