
ಧರ್ಮಸ್ಥಳ: ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳ, ಧರ್ಮಸ್ಥಳದ ಪವಿತ್ರ ನೇತ್ರಾವತಿ ನದಿಯ ಉಪನದಿ ಮೃತ್ಯುಂಜಯ ಹೊಳೆಗೆ ದುಷ್ಕರ್ಮಿಗಳು ಗೋ ಮಾಂಸ ತ್ಯಾಜಗಳನ್ನು ತಂದು ಎಸೆದಿರುವ ಘಟನೆ ನಡೆದಿದೆ.
ಗೋಹತ್ಯೆಯ ಬಳಿಕ ಗೋ ತ್ಯಾಜ್ಯಗಳನ್ನು ಮೂಟೆಗಳಲ್ಲಿ ತಂದು ಮೃತ್ಯುಂಜಯ ಹೊಳೆಗೆ ಎಸೆಯಲಾಗಿದ್ದು, ಚಾರ್ಮಡಿ ಗ್ರಾಮದ ಅನ್ನಾರ್ ಬಳಿ ನದಿಯಲ್ಲಿ 11ಕ್ಕೂ ಹೆಚ್ಚು ಮೂಟೆಗಳಲ್ಲಿ ಗೋ ತ್ಯಾಜ್ಯಗಳು ಪತ್ತೆಯಾಗಿವೆ.
ಮೃತ್ಯುಂಜಯ ಹೊಳೆ ನೇತ್ರಾವತಿ ನದಿ ಉಪನದಿಯಾಗಿದ್ದು, ನದಿಯ ಪಾವಿತ್ರ್ಯತಗೆ ಹಾಗೂ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯುಂಟಾಗಿದೆ. ಮೃತ್ಯುಂಜಯ ಹೊಳೆ ದಡದಲ್ಲಿ ರಾಸಿ ರಾಶಿ ಮೂಟೆಗಳು, ಗೋವಿನ ರುಂಡ, ಮುಂಡ, ಮೂಳೆ, ಮಾಂಸ, ಚರ್ಮಗಳು ಬಿದ್ದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಭಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ್ಯುಂಜಯ ಹೊಳೆ ನೇತ್ರಾವತಿ ನದಿಯನ್ನು ಸೇರುವ ಹೊಳೆಯಾಗಿದ್ದು, ಮಂಜುನಾಥ ಸ್ವಾಮಿ ದೇವರ ಅಭಿಷೇಕಕ್ಕೂ ನೇತ್ರಾವತಿ ನದಿ ನೀರು ಬಳಸಲಾಗುತ್ತದೆ. ಲಕ್ಷಾಂತರ ಜನ ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಭಕ್ತರ ನಂಬಿಕೆಗೆ ಗೊ ಹಂತಕರು ಕೊಳ್ಳಿಯಿಟ್ಟಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ಕಿಡಿಕಾರಿದ್ದಾರೆ. ತಕ್ಷಣ ಪೊಲೀಸರು ಈ ಬಗ್ಗೆ ಕ್ರಮ ವಹಿಸಿ, ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.