ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ರೇಣುಕಾಂಬಾ ದೇವಾಲಯವು ಭಕ್ತರ ಭಕ್ತಿಯ ಕೇಂದ್ರಬಿಂದುವಾಗಿದೆ. ಪ್ರತಿ ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ. ಇದರ ಫಲವಾಗಿ ದೇವಾಲಯದ ಹುಂಡಿಗಳಲ್ಲಿ ಭಾರಿ ಪ್ರಮಾಣದ ಕಾಣಿಕೆ ಸಂಗ್ರಹವಾಗುತ್ತದೆ.
ಇತ್ತೀಚೆಗೆ, ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಸಮ್ಮುಖದಲ್ಲಿ ದೇವಾಲಯದ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ಈ ಎಣಿಕೆಯಲ್ಲಿ ಬರೋಬ್ಬರಿ 35.07 ಲಕ್ಷ ರೂಪಾಯಿ ಸಂಗ್ರಹವಾಗಿರುವುದು ತಿಳಿದುಬಂದಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಎಣಿಕೆಯಲ್ಲಿ 43.15 ಲಕ್ಷ ರೂಪಾಯಿ ಸಂಗ್ರಹವಾಗಿತ್ತು.
ಈ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಿ.ಕೆ. ಪ್ರಮೀಳಾ ಕುಮಾರಿ, ಶಿರಸ್ತೇದಾರ್ ಎಸ್. ನಿರ್ಮಲಾ, ನಾಡಕಚೇರಿ ಉಪ ತಹಶೀಲ್ದಾರ್ ಲಲಿತಾ, ತಾಲೂಕು ಪ್ರಭಾರ ರಾಜಸ್ವ ನಿರೀಕ್ಷಕ ವಿನೋದ್, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ಎಂ. ಕೃತಿ, ಕೆನರಾ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ಸಂಜಯ್ ಕಾಟೆ ಸೇರಿದಂತೆ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಹಾಗೂ ದೇವಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.