ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ, ಮೋದಿಯವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಅವರ ಮಾತನ್ನೇ ನಾನು ಈಗ ನೆನಪು ಮಾಡಿದೆ. ಸತ್ಯ ಹೇಳಿದರೆ ಗರ್ವ ತೋರಿಸಿದಂತೆ ಆಗುತ್ತದಾ? ತಮಗೆ ಮೋದಿಯವರೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಅದೇ ಬಾಂಧವ್ಯದ ಮೇಲೆ ಮೇಕೆದಾಟು ಅಣೆಕಟ್ಟು ಮಾಡಿಸಲಿ. ಸುಳ್ಳು ಯಾಕೆ ಹೇಳುತ್ತಾರೆ. ಎನ್.ಡಿ.ಎ ಬಂದರೆ ಮಾಡಿಸುತ್ತೇನೆ ಎನ್ನುವವರು ಈಗಲೇ ಮಾಡಿಸಲಿ ಎಂದಿದ್ದಾರೆ.
ತಾವೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 200 ಲೋಕಸಭಾ ಸೀಟುಗಳನ್ನು ಗೆಲ್ಲುವುದೂ ಕಷ್ಟ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ತಂತ್ರಗಾರಿಕೆ ಕಾರಣದಿಂದ 400 ಸೀಟು ಗೆಲ್ಲುವುದಾಗಿ ಹೇಳುತ್ತಿದ್ದಾರೆ. ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರೇ ಜನರ ಎದುರು ಮೂರ್ಖರಾಗುತ್ತಾರೆ. ಈ ಬಾರಿ 400 ದಾಟುತ್ತೇವೆ ಎಂದು ಪ್ರಧಾನಿ ಮೋದಿಯವರು ಹೇಳುತ್ತಾರೆ, ಆದರೆ ಅಭಿವೃದ್ಧಿ ಶೂನ್ಯ ಆಡಳಿತವೇ ಅವರ ಈ ವರೆಗಿನ ಸಾಧನೆ. ಅಭಿವೃದ್ಧಿ ಮಾಡಿದ್ದರೆ ಟ್ರೇಲರ್ ಆರಂಭ ಆಗುತ್ತಿತ್ತು, ಹಾಗಾಗಿ ಇನ್ನು ಬಾಕಿ ಉಳಿದಿರುವುದು ಸುಳ್ಳಿನ ಪಿಕ್ಚರ್ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ನವರು ಮೈತ್ರಿ ಎಂದರೇನು ಎಂದು ಕಳೆದ ಬಾರಿಯೇ ತೋರಿಸಿದ್ದಾರೆ. ಮೈತ್ರಿಯಲ್ಲಿ ನಾಯಕರು ಜೊತೆಯಾಗುವುದು ಮುಖ್ಯವಲ್ಲ, ಜನರು ಒಂದಾಗಬೇಕು. ಜನರು ಯಾವ ಪಕ್ಷಕ್ಕೂ ಸೇರಿದವರಲ್ಲ, ಮೈತ್ರಿ ಮಾಡಿಕೊಂಡಿದ್ದಾರೆ ಎಂದು ನಾಯಕರ ಮಾತು ಕೇಳುವವರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.