alex Certify ಕೊರೊನಾ 2 ನೇ ಅಲೆಯಲ್ಲಿ ಸಾವು – ನೋವಿನಿಂದ ತತ್ತರಿಸಿದ ಕುಟುಂಬಗಳಿಗೆ ಶಾಕ್‌ ನೀಡುತ್ತೆ ಈ ಸುದ್ದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 2 ನೇ ಅಲೆಯಲ್ಲಿ ಸಾವು – ನೋವಿನಿಂದ ತತ್ತರಿಸಿದ ಕುಟುಂಬಗಳಿಗೆ ಶಾಕ್‌ ನೀಡುತ್ತೆ ಈ ಸುದ್ದಿ….!

ಬದ್ನಾವರ್: ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದ ವ್ಯಕ್ತಿಯೊಬ್ಬರು ಇದೀಗ ಜೀವಂತವಾಗಿ ಪತ್ತೆಯಾಗಿದ್ದಾರೆ.

ಮೃತಪಟ್ಟಿದ್ದರು ಎನ್ನಲಾಗಿ ಆತನ ಅಂತ್ಯಸಂಸ್ಕಾರವನ್ನು ಸಹ ಆಸ್ಪತ್ರೆಯ ಅಧಿಕಾರಿಗಳು ನೆರವೇರಿಸಿದ್ದರು. ಇದೀಗ ಆ ವ್ಯಕ್ತಿ ಪತ್ತೆಯಾಗಿದ್ದು, ಕುಟುಂಬ ಸದಸ್ಯರ ಸಂತಸಕ್ಕೆ ಪಾರವೇ ಇಲ್ಲ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಣ್ವನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡದ್‌ಕಲನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 41 ವರ್ಷದ ಕಮಲೇಶ್ ಗೆಂದಾಲಾಲ್ ಪಾಟಿದಾರ್, ಶುಕ್ರವಾರ ರಾತ್ರಿ ಸರ್ದಾರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ವೇಲಿ ಗ್ರಾಮಕ್ಕೆ ಮರಳಿದ್ರು.

ಯಾರೋ ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಾರೆ ಎಂದು ಕಮಲೇಶ್ ಹೇಳಿದ್ದಾರೆ. ಅವಕಾಶ ಸಿಕ್ಕ ತಕ್ಷಣ ದುಷ್ಕರ್ಮಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಶುಕ್ರವಾರ ರಾತ್ರಿ ಸರ್ದಾರ್‌ಪುರ ತಹಸಿಲ್‌ನಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದಾನೆ. ಇದೀಗ ಅವರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಮಲೇಶ್ ಕೋವಿಡ್ -19 ಸೋಂಕಿಗೆ ಒಳಗಾದ ನಂತರ ಜೂನ್ 2021 ರಲ್ಲಿ ಗುಜರಾತ್‌ನ ಬರೋಡಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಕಮಲೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಕುಟುಂಬಕ್ಕೆ ತಿಳಿಸಿದ್ದರು.

ಆಸ್ಪತ್ರೆಯಿಂದ ಬಂದ ಮಾಹಿತಿಯ ಮೇರೆಗೆ ಸಂಬಂಧಿಕರು ಆಸ್ಪತ್ರೆಗೆ ತಲುಪಿದರು. ಆದರೆ, ಕೋವಿಡ್ -19 ಪ್ರೋಟೋಕಾಲ್ ಅನುಸರಿಸಿ, ಶವವನ್ನು ದೂರದಿಂದ ಸಂಬಂಧಿಕರಿಗೆ ತೋರಿಸಲಾಯಿತು. ಕುಟುಂಬದ ಸದಸ್ಯರಿಗೆ, ದೇಹದ ಹೊದಿಕೆಯಲ್ಲಿ ಶವವನ್ನು ಖಚಿತವಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ.

ಆದರೆ, ವೈದ್ಯರೇ ಹೇಳಿದ್ದರಿಂದ ಕುಟುಂಬಸ್ಥರು ಶವವನ್ನು ಕಮಲೇಶ್ ನದ್ದೇ ಎಂದು ಅಂದುಕೊಂಡರು. ಸೋಂಕಿನಿಂದ ಮೃತಪಟ್ಟ ನಂತರ, ಕುಟುಂಬ ಸದಸ್ಯರಿಗೆ ಮೃತದೇಹವನ್ನು ನೀಡಲಿಲ್ಲ. ಕೋವಿಡ್ ತಂಡವು ಬರೋಡಾದಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನಡೆಸಿತು.

ಅಧಿಕಾರಿಗಳು ಕಮಲೇಶ್ ನ ಮರಣ ಪ್ರಮಾಣ ಪತ್ರವನ್ನೂ ನೀಡಿದ್ದರು. ಆಸ್ಪತ್ರೆಯ ದಾಖಲೆಗಳ ಪ್ರಕಾರ, ಕಮಲೇಶ್ ಮೃತಪಟ್ಟಿದ್ದಾರೆ ಎಂದು ಪರಿಗಣಿಸಿ, ಕುಟುಂಬಸ್ಥರು ಮನೆಯಲ್ಲಿ ಸಂತಾಪ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದರು.

ತನ್ನ ಮಗನ ಸಾವಿನಿಂದ ತಂದೆ ಗೆಂದಾಲಾಲ್ ತೀವ್ರ ಆಘಾತಕ್ಕೊಳಗಾಗಿದ್ದರು. ಇಲ್ಲಿಯವರೆಗೂ ಅವರು ಚೇತರಿಸಿಕೊಂಡಿರಲಿಲ್ಲ. ಹೆಂಡತಿ ಕೂಡ ಎರಡು ವರ್ಷಗಳಿಂದ ವಿಧವಾ ಜೀವನವನ್ನು ನಡೆಸುತ್ತಿದ್ದಳು. ಆದರೆ, ಕಮಲೇಶ್ ಬದುಕುಳಿದಿರುವ ಬಗ್ಗೆ ತಿಳಿದ ತಕ್ಷಣ ತಂದೆ ಹಾಗೂ ಪತ್ನಿಗೆ ನಂಬಲು ಆಗಲಿಲ್ಲ. ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಕಮಲೇಶ್ ಕೂಡ ತನ್ನ ತಂದೆ ಮತ್ತು ಸಂಬಂಧಿಕರನ್ನು ನೋಡಿ ಭಾವುಕರಾದರು.

ಕೊರೊನಾದಿಂದ ಚೇತರಿಸಿಕೊಂಡ ನಂತರ ಕಮಲೇಶ್ ನನ್ನು ಅಹಮದಾಬಾದ್‌ನಲ್ಲಿ ಗ್ಯಾಂಗ್ ವೊಂದು ಅಪಹರಿಸಿತ್ತು ಎಂದು ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ಈತನನ್ನು ಒತ್ತೆಯಾಳಾಗಿ ಇರಿಸಿದ್ರು. ಬಹುತೇಕ ಪ್ರಜ್ಞಾಹೀನ ಸ್ಥಿತಿಯಲ್ಲೇ ಇರುತ್ತಿದ್ದ. ಶುಕ್ರವಾರ, ಅಹಮದಾಬಾದ್‌ನಿಂದ ಬೇರೆಡೆಗೆ ಕರೆದೊಯ್ಯುತ್ತಿದ್ದಾಗ, ಗ್ಯಾಂಗ್ ಸದಸ್ಯರು ತಿಂಡಿಗಾಗಿ ಹೋಟೆಲ್‌ನಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಅಲ್ಲಿಂದ ಎಸ್ಕೇಪ್ ಆದ ಕಮಲೇಶ್ ತನ್ನ ಸಂಬಂಧಿಕರ ಮನೆ ತಲುಪಿದ್ದಾನೆ ಎನ್ನಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...