
ಧಾರವಾಡ: ಇಲ್ಲಿನ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯು 10 ವರ್ಷಗಳಿಂದ ದೂರವಾಗಿದ್ದ ದಂಪತಿಯನ್ನು ಒಂದುಗೂಡಿಸಿದೆ.
ಧಾರವಾಡದ ಸುಜಾತಾ ಹಾಗೂ ಶಿವಮೊಗ್ಗದ ದೀಪಕ್ ದಿನಕರ ದಂಪತಿ ಭಿನ್ನಾಭಿಪ್ರಾಯಗಳಿಂದ ಪರಸ್ಪರ 10 ವರ್ಷಗಳಿಂದ ದೂರವಾಗಿದ್ದರು.
ಪತಿ ದೀಪಕ್ ಅವರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 11 ವರ್ಷದ ಹೆಣ್ಣು ಮಗಳಿರುವ ಈ ದಂಪತಿಯನ್ನು ನ್ಯಾಯಮೂರ್ತಿಗಳ ಸಲಹೆ ಮೇರೆಗೆ ಮಧ್ಯಸ್ಥಿಕೆಗಾರರ ಎದುರು ಹಾಜರುಪಡಿಸಲಾಯಿತು.
ಉಭಯ ಪಕ್ಷಗಾರರ ಸಂಬಂಧಿಕರು, ಉಭಯ ಪಕ್ಷಗಾರರ ವಕೀಲರಾದ ಎಸ್.ಆರ್. ಹೆಗಡೆ ಮತ್ತು ಗಿರೀಶ ಹಿರೇಮಠ ಹಾಗೂ ಮಧ್ಯಸ್ಥಗಾರರಾದ ಹನುಮಂತರೆಡ್ಡಿ ಸಾವ್ಕಾರ ಅವರ ಹಿತವಚನದ ಮೇರೆಗೆ ಮುಂದಿನ ದಾಂಪತ್ಯ ಜೀವನ, ಭವಿಷ್ಯ ಹಾಗೂ ಮಗಳ ಜೀವನದ ನಿರ್ವಹಣೆಯ ಸದುದ್ದೇಶವನ್ನು ಇಟ್ಟುಕೊಂಡು ರಾಜಿ ಮಾಡಿಕೊಂಡರು.
ಒಂದಾದ ದಂಪತಿಯನ್ನು ನ್ಯಾಯಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಪಿ. ಕೃಷ್ಣ ಭಟ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ಹಾಜರುಪಡಿಸಲಾಯಿತು. ದಂಪತಿ ಮತ್ತೆ ಒಂದಾಗಿರುವುದರ ಬಗ್ಗೆ ತಿಳಿದು ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿದರು ಎಂದು ಹೈಕೋರ್ಟ್ ಪೀಠದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.