ಹೈದರಾಬಾದ್: ಮತದಾರರಿಗೆ ತಾನುಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಕಾರ್ಪೊರೇಟರ್ ಒಬ್ಬರು ಸಭೆ ಮಧ್ಯೆ ತನ್ನ ಕಪಾಳಕ್ಕೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡಿರುವ ವಿಚಿತ್ರ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಕಾರ್ಫೊರೇಟರ್ ತಾನು ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಚಪ್ಪಲಿಯಿಂದ ತನಗೆ ತಾನೇ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ನರಸೀಪಟ್ಟಣ ಪುರಸಭೆಯ ವಾರ್ಡ್ 20ರ ಕೌನ್ಸಿಲರ್ ಮುಲಪರ್ತಿ ರಾಮರಾಜು ಕೌನ್ಸಿಲ್ ಸಭೆಯಲ್ಲಿ, ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿ ತಮಗೆ ತಾವೇ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾನು ಕಾರ್ಪೊರೇಟರ್ ಆಗಿ ಆಯ್ಕೆಯಾಗಿ 31 ತಿಂಗಳುಗಳು ಕಳೆದಿವೆ. ಆದರೆ ನನ್ನ ವಾರ್ಡ್ ನ ನಾಗರಿಕರ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಚರಂಡಿ, ವಿದ್ಯುತ್, ಸ್ವಚ್ಛತೆ, ರಸ್ತೆ ಮತ್ತಿತರ ಸಮಸ್ಯೆ ಪರಿಹರಿಸಲಾಗಿಲ್ಲ. ಈ ವರ್ಡ್ ನ್ನು ಪುರಸಭೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ಮಾಡಿದ್ದಾರೆ. ಇದರಿಂದಾಗಿ ಈವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಮೂಲಭೂತ ಸೌಲಭ್ಯವನ್ನೂ ಜನರಿಗೆ ಕಲ್ಪಿಸಿಕೊಡಲಾಗುತ್ತಿಲ್ಲ ಎಂದ ಮೇಲೆ ಸಾಯುವುದೇ ಲೇಸು ಎಂದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಾರ್ಪೊರೇಟರ್ ಮುಲಪರ್ತಿ ರಾಮರಾಜು ಸ್ವತಃ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದು, ಕೌನ್ಸಿಲ್ ಸಭೆಯಲ್ಲಿ ತಮ್ಮ ವಾರ್ಡ್ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.