![](https://kannadadunia.com/wp-content/uploads/2022/01/369472-bombay-hc-6.jpg)
ಮದುವೆಯಾಗುತ್ತೇನೆ ಎಂದು ನಂಬಿಸಿ ದೂರುದಾರ ಮಹಿಳೆಯ ಇಚ್ಛೆಯ ವಿರುದ್ಧವಾಗಿ ಆಕೆಯಿಂದ ಒಪ್ಪಿಗೆಯನ್ನು ಪಡೆದುಕೊಂಡು ಲೈಂಗಿಕ ಕ್ರಿಯೆ ನಡೆಸುವುದು ಸರಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಹಾಗೂ ಜಿಎ ಸನಪ್ ಅವರ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಸತ್ಯದ ತಪ್ಪು ಕಲ್ಪನೆಯ ಅಡಿಯಲ್ಲಿ ನೀಡಲಾದ ಒಪ್ಪಿಗೆಯನ್ನು ಮುಕ್ತ ಒಪ್ಪಿಗೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ..?
ಕಳೆದ ವರ್ಷ ಫೆಬ್ರವರಿ 22ರಂದು ಮಹಾರಾಷ್ಟ್ರದ ಗಡ್ಜಿರೋಲಿ ಜಿಲ್ಲೆಯ ವಾಡ್ಸಾದಲ್ಲಿ ಆರೋಪಿಯೊಂದಿಗೆ ದೂರುದಾರ ಮಹಿಳೆಯು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವೇಳೆಯಲ್ಲಿ ಇವರಿಬ್ಬರ ವಿವಾಹವನ್ನು ಏಪ್ರಿಲ್ 13ರಂದು ನೆರವೇರಿಸಲು ನಿಶ್ಚಯಿಸಲಾಗಿತ್ತು.
ಮದುವೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಲಾಗಿತ್ತು. ಆದರೆ ಕೋವಿಡ್ 2ನೇ ಅಲೆ ಹಾಗೂ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಮದುವೆಯನ್ನು ಮೇ 3ಕ್ಕೆ ಮುಂದೂಡಲಾಗಿತ್ತು. ಆದರೆ ಈ ಅವಧಿಯಲ್ಲಿ ದೂರುದಾರ ಮಹಿಳೆಗೆ ಕೋವಿಡ್ ಧೃಡಪಟ್ಟಿದ್ದರಿಂದ ಮದುವೆಯನ್ನು ಮತ್ತೆ ಮುಂದೂಡಲಾಗಿತ್ತು.
ಇದಾಗಿ ಕೆಲವು ವಾರಗಳ ಬಳಿಕ ಆರೋಪಿ ಪ್ರವಾಸ ಏರ್ಪಡಿಸಿದ್ದರು. ಅಲ್ಲಿ ವಧು ಹಾಗೂ ವರನ ಸ್ನೇಹಿತರು ಮತ್ತು ಕುಟುಂಬಸ್ಥರು ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಈ ವೇಳೆಯಲ್ಲಿ ಆರೋಪಿಯು ತಾನು ನಿನ್ನನ್ನು ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದು ನಂಬಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸಿದ್ದನು.
ಇದಾದ ಬಳಿಕ ಆರೋಪಿಯು ಮಹಿಳೆಯನ್ನು ನಿರ್ಲಕ್ಷಿಸಲು ಆರಂಭಿಸಿದನು ಮಾತ್ರವಲ್ಲದೇ ಮದುವೆಯನ್ನು ಮುಂದೂಡಲು ಯತ್ನಿಸಿದ್ದಾನೆ. ಇಷ್ಟು ಸಾಲದು ಎಂಬಂತೆ ಜೂನ್ 22ರಂದು ಆರೋಪಿಯ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದಾರೆ. ಅಲ್ಲದೇ ಈ ಯುವತಿಗೆ ಕುಡಿತದ ಚಟವಿದೆ ಹಾಗೂ ಆಕೆಯ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಆರೋಪಿಸಿದ್ದರು ಎನ್ನಲಾಗಿದೆ.