
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ವಾಗ್ದಾಳಿ ನಡೆಸಿದ್ದಾರೆ,
ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಮೈತ್ರಿ ಪ್ರಸ್ತಾಪಕ್ಕೆ ಬಿ.ಎಸ್.ಪಿ. ಮುಖ್ಯಸ್ಥರು ಪ್ರತಿಕ್ರಿಯೆ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ ಒಂದು ದಿನದ ನಂತರ ಮಾಯಾವತಿ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಮೊದಲು ತನ್ನ ಬಗ್ಗೆ ಚಿಂತಿಸಬೇಕಾಗಿದೆ. ಇಂತಹ ಟೀಕೆಗಳು ತಮ್ಮ ಪಕ್ಷವನ್ನು ಹಾನಿ ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದರು.
ಬಿಜೆಪಿ ಮತ್ತು ಆರ್.ಎಸ್.ಎಸ್. ಭಾರತವನ್ನು ಕೇವಲ ‘ಕಾಂಗ್ರೆಸ್-ಮುಕ್ತ’ವನ್ನಾಗಿ ಮಾಡದೆ ವಿರೋಧ ಮುಕ್ತವನ್ನಾಗಿ ಮಾಡುತ್ತಿದೆ, ಚೀನಾದ ರಾಜಕೀಯ ವ್ಯವಸ್ಥೆಯಂತೆಯೇ ಭಾರತ ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ಕೇವಲ ಒಂದು ಪ್ರಬಲ ಪಕ್ಷದೊಂದಿಗೆ ಉಳಿಯುತ್ತದೆ ಎಂದು ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿಯಂತಹ ನಾಯಕರು ಸಂಸತ್ತಿನಲ್ಲಿ ಪ್ರಧಾನಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷ ನಮ್ಮದವಲ್ಲ, ಪ್ರಪಂಚದಾದ್ಯಂತ ಮೋಜು ಮಾಡುವ ಪಕ್ಷವಲ್ಲ ಎಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಬಿ.ಎಸ್.ಪಿ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅತ್ಯಂತ ಕಳಪೆ ಫಲಿತಾಂಶ ನೀಡಿವೆ. ಮಾಯಾವತಿಯವರ ಪಕ್ಷ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ಮುನ್ನಡೆಸಿದರೂ ನಿರ್ಣಾಯಕ ರಾಜ್ಯದ 403 ಸ್ಥಾನಗಳಲ್ಲಿ ಕೇವಲ ಎರಡನ್ನು ಮಾತ್ರ ಕಾಂಗ್ರೆಸ್ ಪಡೆದಿದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧ ಒಗ್ಗೂಡಿಸುವ ಪ್ರತಿಪಕ್ಷಗಳ ಪ್ರಯತ್ನಗಳ ಮಧ್ಯೆ ಈ ಹೇಳಿಕೆಗಳು ಬಂದಿವೆ.
ಶನಿವಾರ, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ನಾವು ಮಾಯಾವತಿ ಅವರನ್ನು ಸಂಪರ್ಕಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿ ಹೇಳಿದ್ದೆವು. ಆದರೆ ಅವರು ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದ್ದರು.