ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ , ರಾಜ್ಯದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಇದೀಗ ಯುವನಿಧಿ ಯೋಜನೆಗೆ ‘ಸಿಎಂ ಸಿದ್ದರಾಮಯ್ಯ’ ಚಾಲನೆ ನೀಡಿದರು. ಈ ಮೂಲಕ ಯೋಜನೆಗೆ ನೊಂದಣಿಯಾಗಿರುವ ಎಲ್ಲ ಅಭ್ಯರ್ಥಿಗಳ ಖಾತೆಗೆ ಇಂದು ಮೊದಲ ತಿಂಗಳ ಹಣ ಜಮೆ ಆಗಲಿದೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವ ಕೆಜೆ ಜಾರ್ಜ್ ಮತ್ತಿತರಿದ್ದರು.
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಡಿಸೆಂಬರ್ 26 ರಿಂದ ನೋಂದಣಿ ಶುರುವಾಗಿದ್ದು, ಡಿಪ್ಲೋಮಾ, ಪದವೀಧರರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಓನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.
ಪದವೀದಧರರಿಗೆ ರೂ. 3000/- ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1500/- ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡಲಾಗುವುದು. ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣ https://sevasindhugs.karnataka.gov.in/ ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೆ ಅರ್ಹತೆಗಳು
1) 2023ರಲ್ಲಿ ಪದವಿ/ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
2) ಪದವಿ/ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು ಅರ್ಜಿ ಸಲ್ಲಿಸಬಹುದಾಗಿದೆ.
3) ಸ್ವಯಂ ಉದ್ಯೋಗ ಹೊಂದಿಲ್ಲದವರು
4) ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು
5) ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು)
6) ನೋಂದಣಿಗೆ ಅಗತ್ಯವಿರುವ ದಾಖಲಾತಿಗಳು- ಎಸ್.ಎಸ್.ಎಲ್.ಸಿ. ಪಿಯುಸಿ, ಪದವಿ/ ಡಿಪ್ಲೋಮಾ ಪ್ರಮಾಣ ಪತ್ರ ಅಗತ್ಯವಾಗಿದೆ.
7) ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬಹುದು. ಯುವನಿಧಿಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅಥವಾ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಗೆ ಭೇಟಿ ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವವರಿಗೆ ಮುಖ್ಯ ಸೂಚನೆ
1) ನೇರ ನಗದು ವರ್ಗಾವಣೆ (Direct Transfer) ಸ್ವೀಕರಿಸಲು ಆಧಾರ್ ಸಂಖ್ಯೆಯೊಂದಿಗೆ (Aadhar-seeded) ಬ್ಯಾಂಕ್ ಖಾತೆಯನ್ನು ನೀವು ಹೊಂದಿರಬೇಕು.
2) Aadhar-linked mobile number ಅಂದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಅಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ನೀಡಬೇಕು. ಹೆಚ್ಚಿನ ಮಾಹಿತಿ ಅಥವಾ ಸಹಾಯವಾಣಿಗಾಗಿ 1800 599 9918 ಸಂಪರ್ಕಿಸಬಹುದಾಗಿದೆ.