
ಬೆಂಗಳೂರು: ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ಹೊಸ ಯೋಜನೆ ಘೋಷಣೆ ಮಾಡಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಹುತಾತ್ಮ ಸೈನಿಕರ ಕುಟುಂಬದವರಿಗೆ ಉದ್ಯೋಗ ನೀಡಲಾಗುವುದು. ಯಾವುದೇ ಪ್ರಶ್ನೆ ಕೇಳದೇ ನೇರವಾಗಿ ಅವರ ಮನೆ ಬಾಗಿಲಿಗೆ ನೌಕರಿ ಆದೇಶ ಕೊಡಲಾಗುವುದು. 25 ಲಕ್ಷ ರೂಪಾಯಿ ಪರಿಹಾರ ಅವರ ಕುಟುಂಬಕ್ಕೆ ನೀಡಲಾಗುವುದು.
ಎಲ್ಲ ಸರ್ಕಾರಿ ಶಾಲೆಗಳಲ್ಲಿ ಬಾಕಿ ಉಳಿದ ಎಲ್ಲಾ ಕಡೆ ಶೌಚಾಲಯ ನಿರ್ಮಾಣ ಮಾಡಲಾಗುವುದು. ಒಂದೇ ವರ್ಷದಲ್ಲಿ ಶೇ. 100 ರಷ್ಟು ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಮುಂದಿನ ಆಗಸ್ಟ್ 15 ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುವುದು, ಯುವಕರಿಗೆ ಉದ್ಯೋಗಾವಕಾಶ, ರಾಜ್ಯದ ರೈತರಿಗಾಗಿ ವಿಶೇಷ ಯೋಜನೆ ಜಾರಿ, ಕೂಲಿ ಕಾರ್ಮಿಕರು ಇರುವ ಸ್ಥಳಗಳಲ್ಲಿ 4000 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.