
ಬೆಳಗಾವಿ: ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ವರ್ಷವೇ 2500 ಮನೆಗಳು ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ನೂತನ ಕಚೇರಿಯ ಕಟ್ಟಡವನ್ನು ಬುಧವಾರ ಉದ್ಘಾಟಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದ ಒಂದು 116 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳು ಉದ್ಘಾಟನೆ ಹಂತದಲ್ಲಿವೆ. ಪೊಲೀಸ್ ಸಾರಿಗೆ ವ್ಯವಸ್ಥೆ ಬಲಪಡಿಸಲು 80 ಕೋಟಿ ರೂ. ನೀಡಲಾಗಿದೆ. 300ಕ್ಕೂ ಅಧಿಕ ಜೀಪ್, ಸ್ಕಾರ್ಪಿಯೋ, ಬುಲೇರೋಗಳನ್ನು ಖರೀದಿ ಮಾಡಲಾಗಿದೆ. ವಿವಿಧ ಹಂತದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ವಾಹನಗಳನ್ನು ಒದಗಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದರು.
ನಾನು ಗೃಹ ಮಂತ್ರಿಯಾಗಿದ್ದಾಗ ಆರಂಭವಾಗಿದ್ದ ಕಟ್ಟಡಗಳು ಒಂದು ವರ್ಷದಲ್ಲಿ ಪೂರ್ಣಗೊಂಡಿವೆ. ಇವನ್ನು ಮುಖ್ಯಮಂತ್ರಿಯಾದ ಬಳಿಕ ಉದ್ಘಾಟಿಸಿದ್ದೇನೆ. ನಿಗಮದ ವತಿಯಿಂದ ರಾಜ್ಯದಲ್ಲಿ ಎರಡು ಬಂಧಿಖಾನೆಗಳನ್ನು ನಿರ್ಮಾಣ ಮಾಡಲಾಗುವುದು. ವಿದಿ ವಿಜ್ಞಾನ ಪ್ರಯೋಗಾಲಯಲನ್ನ ಸ್ಥಾಪಿಸಲಾಗಿದೆ. ಅಗತ್ಯ ತಜ್ಞರ ನೇಮಕಾತಿ ಮಾಡಲಾಗಿದೆ. ಹಿಂದೆ ವಿದಿ ವಿಜ್ಞಾನ ವರದಿಗಳು ಕೈಸೇರಲು ಮೂರು ತಿಂಗಳು ಹಿಡಿಯುತ್ತಿತ್ತು. ಸದ್ಯ 30 ದಿನಗಳ ವರದಿಗಳನ್ನು ನೀಡಲಾಗುತ್ತಿದೆ. 15 ದಿನದಲ್ಲಿ ವಿದಿ ವಿಜ್ಞಾನ ವರದಿ ನೀಡಲು ಕ್ರಮ ವಹಿಸುವುದಾಗಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪೊಲೀಸ್ ಇಲಾಖೆ ಗೃಹ ನಿರ್ಮಾಣದ ಜೊತೆಗೆ ನೂತನ ಪೊಲೀಸ್ ಠಾಣೆ, ಎಫ್ಎಸ್ಎಲ್ ಲ್ಯಾಬ್ ನಿರ್ಮಾಣ, ವಾಹನ ಹಾಗೂ ನೂತನ ಶಸ್ತ್ರಾಸ್ತ್ರ ಖರೀದಿಸಲು ಮುಖ್ಯಮಂತ್ರಿಗಳು ಅಗತ್ಯ ಅನುದಾನ ನೀಡಿದ್ದಾರೆ ಎಂದರು.
ಶಾಸಕ ಅನಿಲ್ ಎಸ್. ಬೆನಕೆ ಅಧ್ಯಕ್ಷತೆ ವಹಿಸಿದ್ದರು. ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಸಂಸದೆ ಮಂಗಳಾ ಅಂಗಡಿ, ಶಾಸಕ ಮಹೇಶ ಕುಮಠಳ್ಳಿ, ಒಳಾಡಳಿತ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮ ವ್ಯವಸ್ಥಾಪಕ ನಿರ್ದೇಶಕರು ಅರುಣ ಜೆ. ಚಕ್ರವರ್ತಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ. ಜಿ. ಹಿರೇಮಠ, ಉತ್ತರ ಬೆಳಗಾವಿ ಆರಕ್ಷಕ ಮಹಾನಿರೀಕ್ಷಕ ಎನ್. ಸತೀಶ್ ಕುಮಾರ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ. ಪಾಟೀಲ್, ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಕೆ. ಗಡಾದಿ, ಸ್ನೇಹ .ಪಿ.ವಿ., ಸಿದ್ದನಗೌಡ ವೈ. ಪಾಟೀಲ ಮೊದಲಾದವರು ಇದ್ದರು.