ಬೆಂಗಳೂರು: ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, 78 ಲಕ್ಷ ರೈತರ ಜಮೀನಿಗೆ ಆಧಾರ್ ಜೋಡಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ನೈಸರ್ಗಿಕ ಮತ್ತು ಡಿಜಿಟಲ್ ಕೃಷಿ ಕುರಿತ ವರ್ಚುಯಲ್ ವಿಡಿಯೋ ಸಂವಾದದಲ್ಲಿ ಗೃಹ ಕಚೇರಿ ಕೃಷ್ಣಾ ದಿಂದ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ರೈತರ ಜಮೀನುಗಳ ಸರ್ವೆ ನಂಬರ್ ಗೆ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತಿದ್ದು, ಇದುವರೆಗೆ 78 ಲಕ್ಷ ರೈತರನ್ನು ಆಧಾರ್ ಜೋಡಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಭೂಮಿ ತಂತ್ರಜ್ಞಾನದಡಿ ಈ ಹಿಂದೆ ಡಿಜಿಟಲೀಕರಣ ಮಾಡಲಾಗಿದ್ದು, 62 ಲಕ್ಷ ಭೂಮಿಯುಳ್ಳ ಮತ್ತು 16 ಲಕ್ಷ ಭೂ ರಹಿತರನ್ನು ತಂತ್ರಾಂಶದಲ್ಲಿ ಸೇರ್ಪಡೆ ಮಾಡಲಾಗಿದೆ. ರಾಜ್ಯದಲ್ಲಿ ಫ್ರೂಟ್ಸ್ ಯೋಜನೆ ಜಾರಿಗೆ ತಂದಿದ್ದು, ಇದನ್ನು ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳುತ್ತಿವೆ. ತಂತ್ರಾಂಶವನ್ನು ನಿರಂತರವಾಗಿ ಸುಧಾರಣೆ ಮಾಡಲಾಗುತ್ತಿದೆ. ತಂತ್ರಜ್ಞಾನದ ಮೂಲಕ ರೈತರ ತಮ್ಮ ಭೂಮಿ ಹಾಗೂ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. 212 ಕೋಟಿ ಭೂಪ್ರದೇಶವನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.