
ರಾಯಪುರ: ಛತ್ತೀಸ್ಗಢದ ಕಾಂಗ್ರೆಸ್ ಶಾಸಕರೊಬ್ಬರು ಹಣದ ರಾಶಿಯ ಮುಂದೆ ಕುಳಿತಿರುವ ವೀಡಿಯೊ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ. ಇದೇ ವೇಳೆ ಸಂಬಂಧಪಟ್ಟ ಶಾಸಕರು ತಮ್ಮ ಪ್ರತಿಷ್ಠೆಗೆ ಮಸಿ ಬಳಿಯುವ ಷಡ್ಯಂತ್ರ ಎಂದು ದೂರಿದ್ದಾರೆ.
ಛತ್ತೀಸ್ಗಢ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕಾಂಗ್ರೆಸ್ ಛತ್ತೀಸ್ಗಢವನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ, ಶಾಸಕ ರಾಮ್ ಕುಮಾರ್ ಯಾದವ್ ಹಾಸಿಗೆಯ ಪಕ್ಕದಲ್ಲಿ ಸೋಫಾದಲ್ಲಿ ಕುಳಿತಿರುವುದನ್ನು ಕಾಣಬಹುದು, ಅಲ್ಲಿ ನಗದು ಕಟ್ಟುಗಳನ್ನು ಹಾಕಲಾಗಿದೆ. ಮತ್ತೊಬ್ಬ ವ್ಯಕ್ತಿ ಯಾದವ್ ಜೊತೆಗಿದ್ದು, ನಗದು ಪಕ್ಕದಲ್ಲಿ ಕುಳಿತಿರುವ ಮೂರನೇ ವ್ಯಕ್ತಿ ಗುರುತು ಪತ್ತೆಯಾಗಿಲ್ಲ.
ಚೌಧರಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಕಾಂಗ್ರೆಸ್ ತನ್ನ ಶಾಸಕರ ಮುಂದೆ ನೋಟುಗಳ ಬಂಡಲ್ ಗಳನ್ನು ಇರಿಸಿರುವ ಈ ವೀಡಿಯೊವನ್ನು ಒಪ್ಪಿಕೊಳ್ಳುತ್ತದೆಯೇ ಅಥವಾ ವೀಡಿಯೊದ ಬಗ್ಗೆ ಏನಾದರೂ ಅನುಮಾನವಿದ್ದರೆ, ಈ ವಿಷಯವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಧೈರ್ಯವನ್ನು ತೋರಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಯಾದವ್ ಪ್ರತಿಕ್ರಿಯಿಸಿ, ನಾನು ಬಡ ಕುಟುಂಬದಿಂದ ಬಂದಿರುವ ಕಾರಣ ನನ್ನ ಇಮೇಜ್ಗೆ ಧಕ್ಕೆ ತರಲು ಹೀಗೆ ಮಾಡಿದ್ದಾರೆ. ನಾನು ಶಾಸಕನಾಗಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಕೆಲವರ ಪಿತೂರಿ ಇದಾಗಿದೆ. ನಾನು ಅಲ್ಲಿದ್ದರೂ ಹಣದತ್ತ ನೋಡುತ್ತಿಲ್ಲ. ನನ್ನ ಗಮನವೂ ಅತ್ತ ಇಲ್ಲ. ಇದರ ಹಿಂದೆ ಪಿತೂರಿ ಇದೆ. ನಾನು ವಿಮಾನದೊಂದಿಗೆ, ದೊಡ್ಡ ಅರಮನೆಯೊಂದಿಗೆ ಫೋಟೋ ತೆಗೆಸಿಕೊಂಡರೆ ನಾನು ಅದರ ಮಾಲೀಕನಾಗುತ್ತೇನೆಯೇ? ಎಂದು ಪ್ರಶ್ನಿಸಿದ್ದಾರೆ.