ಕಾಲೇಜಿನ ದಿನಗಳನ್ನು ನೆನಪಿಸುವಂತೆ ಕಚೇರಿಯ ಬಾಗಿಲು ಮುಚ್ಚಿ ತಡವಾಗಿ ಬಂದ ಉದ್ಯೋಗಿಗಳಿಗೆ ಸಿಇಒ ಕ್ಲಾಸ್ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ರೆಡ್ಡಿಟ್ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡ ಅನುಭವದ ಪ್ರಕಾರ, ಸಿಇಒ ಮಧ್ಯಾಹ್ನ 12 ಗಂಟೆಗೆ ಕಚೇರಿಯ ಬಾಗಿಲುಗಳನ್ನು ಮುಚ್ಚಿದ್ದು, ತಡವಾಗಿ ಬಂದ ನೌಕರರನ್ನು ಹೊರಗೆ ನಿಲ್ಲಿಸಿ, ಸಮಯಪ್ರಜ್ಞೆ ಕುರಿತು ಪಾಠ ಮಾಡಿದ್ದಾರೆ.
“ನಮ್ಮ ಸಿಇಒ ನಮ್ಮನ್ನು ಶಾಲಾ ದಿನಗಳಿಗೆ ಕರೆದೊಯ್ದರು ! ಮಧ್ಯಾಹ್ನ 12 ಗಂಟೆಗೆ ಕಚೇರಿಯ ಬಾಗಿಲು ಮುಚ್ಚಿ, ತಡವಾಗಿ ಬಂದವರನ್ನು ಹೊರಗೆ ನಿಲ್ಲಿಸಿದ ನಂತರ, ಉತ್ಪಾದಕತೆ ಮತ್ತು ಸಮಯಪ್ರಜ್ಞೆಯ ಬಗ್ಗೆ ಉಪನ್ಯಾಸ ನೀಡಿದರು” ಎಂದು ರೆಡ್ಡಿಟ್ ಬಳಕೆದಾರರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಯಿತು. ಕೆಲವರು ಸಿಇಒ ಕ್ರಮವನ್ನು ಬೆಂಬಲಿಸಿದರೆ, ಹಲವರು ಟೀಕಿಸಿದ್ದಾರೆ. ತಡವಾಗಿ ಬರುವವರಿಗೆ ವೇತನ ಕಡಿತದಂತಹ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಈ ರೀತಿ ಶಿಕ್ಷಿಸುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟರು.
“ಇದು ಅವಮಾನಕರ ನಡವಳಿಕೆ. ತಡವಾಗಿ ಬರುವವರನ್ನು ಅರ್ಧ ದಿನದ ಹಾಜರಾತಿ ಎಂದು ಗುರುತಿಸಬಹುದು. ವೇತನದಲ್ಲಿ ಕಡಿತವಾದರೆ, ಹೆಚ್ಚಿನವರು ತಡವಾಗಿ ಬರುವುದಿಲ್ಲ. ಆದರೆ ಇದು ಬಾಲಿಶ ನಡವಳಿಕೆ,” ಎಂದು ಓರ್ವ ಬಳಕೆದಾರರು ಬರೆದಿದ್ದಾರೆ.
“ಕೆಲಸದ ಸ್ಥಳದಲ್ಲಿ ಸಮಯಪ್ರಜ್ಞೆ ಮುಖ್ಯ. ಆದರೆ ಈ ರೀತಿ ಬಾಗಿಲು ಹಾಕಿ ನಿಲ್ಲಿಸುವುದು ಸರಿಯಲ್ಲ,” ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.