![](https://kannadadunia.com/wp-content/uploads/2023/02/C.T.Ravi_.jpg)
ಬೆಂಗಳೂರು: ಬೆಲೆ ಏರಿಕೆ ಮಾಡಲ್ಲ ಎಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಊಸರವಳ್ಳಿಯಂತೆ ಬಣ್ಣ ಬದಲಿಸಿದ್ದಾರೆ ಎಂದು ಎಂಎಲ್ ಸಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯನವರೇ ಊಸರವಳ್ಳಿಗೂ ನಿಮಗೂ ಸ್ಪರ್ಧೆ ಮಾಡಿದರೆ ಗೆಲ್ಲುವುದು ಸಿದ್ದರಾಮಯ್ಯ ನೀವೇ. GST ಜೊತೆ YST ತಂದ್ರಿ, ಜೊತೆಗೆ ಡಿ.ಕೆ ಟ್ಯಾಕ್ಸ್ ಕೂಡ ಹಾಕಿದ್ರಿ. ನಿಮ್ಮದು ನಾಲಿಗೆಯೋ ಏನು ಎಂದು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಕಿಡಿಕಾರಿದರು.
ರಕ್ತದ ರುಚಿ ನೋಡಿದ ಹುಲಿ ಮತ್ತೆ ಮತ್ತೆ ಅದನ್ನೇ ಬಯಸುತ್ತಂತೆ. ಆಡಳಿತಕ್ಕೆ ಬಂದ ಕೂಡಲೇ ಗೋಸುಂಬೆ ಕೂಡ ನಾಚುವ ರೀತಿ ಬೆಲೆ ಏರಿಕೆ ಮಾಡಿ ಕೇಂದ್ರದ ಕಡೆ ಬೊಟ್ಟು ತೋರುತ್ತಿದ್ದೀರಿ. ಊಸರವಳ್ಳಿಯನ್ನೂ ಹಿಂದಿಕ್ಕುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರವಿರುವ ಮೂರು ಕಡೆಯು ಜನರಿಗೆ ನಾಮ ಹಾಕುತ್ತಿದ್ದಾರೆ. ಬಕ್ರೀದ್ ದಿನ ಸಿಎಂ ಮಾತ್ರ ಟೋಪಿ ಹಾಕಿಕೊಳ್ತಾರೆ ಅಂದುಕೊಂಡಿದ್ವಿ. ಆದ್ರೆ ಇವರು ಎಲ್ಲರಿಗೂ ಟೋಪಿ ಹಾಕಿದ್ದಾರೆ. ಚೊಂಬಾದರೂ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತೆ. ಆದರೆ ಕಾಂಗ್ರೆಸ್ ನಾಯಕರು ಕೊಡುವುದು ಹಳೆಯ ಚಿಪ್ಪು. ಚಿಪ್ಪು ಕೂಡ ಮೂರು ತೂತು, ಇವರ ಸರ್ಕಾರವೂ ತೂತು. ಇಲ್ಲಿ ಸಂಗ್ರಹ ಮಾಡಿದ ಹಣವೆಲ್ಲ ರಾಹುಲ್ ಗಾಂಧಿಗೆ ಹೋಗುತ್ತಿದೆ. ಬೆಲೆ ಏರಿಕೆ ಇಳಿಸಬೇಕು. ಇಲ್ಲಾ ಇವರೇ ಇಳಿಯಬೇಕು ಎಂದು ಆಗ್ರಹಿಸಿದರು.