
ಬೆಳಗಾವಿ: ಉದ್ಯಮಿ ಅಪಹರಿಸಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ರಾಮನಗಟ್ಟಿ ಅವರನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 14ರಂದು ಉದ್ಯಮಿ ಬಸವರಾಜ ಅಂಬಿ ಅವರನ್ನು ಅಪಹರಣ ಮಾಡಲಾಗಿತ್ತು. ಮೂಡಲಗಿ ತಾಲೂಕಿನ ರಾಜಪುರ ಗ್ರಾಮದ ಬಸವರಾಜ ಅಂಬಿ ಅಪಹರಣ ಮಾಡಿ 5 ಕೋಟಿ ರೂಪಾಯಿ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು.
ಬಸವರಾಜನನ್ನು ಪೊಲೀಸರು ರಕ್ಷಿಸಿದ್ದರು. ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು ತನಿಖೆಯ ವೇಳೆ ಮಂಜುಳಾ ಕಿಂಗ್ ಪಿನ್ ಎನ್ನುವ ವಿಚಾರ ಬಹಿರಂಗವಾಗಿತ್ತು. ಮಂಜುಳಾ ಪುತ್ರ ಈಶ್ವರನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ತಾಂತ್ರಿಕ ಸಾಕ್ಷ್ಯ, ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.