ಬೆಂಗಳೂರು : ನಟಿ ರನ್ಯಾರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣ ಸಿಐಡಿ ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ (Gold smuggling) ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿರುತ್ತಾರೆ. ನಟಿ ರನ್ಯಾ ರಾವ್ ಇವರು ವಿದೇಶಗಳಿಗೆ ಹೋಗುವಾಗ ಮತ್ತು ಬರುವ ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಲೋಪಗಳು ಆಗಿರುವುದಾಗಿ ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ.
ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಸಿಐಡಿ (Criminal Investigation Department) ಬೆಂಗಳೂರು, ವತಿಯಿಂದ ವಿಚಾರಣೆ ನಡೆಸುವ ಬಗ್ಗೆ ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನಟಿ ರನ್ಯಾ ರಾವ್ ರವರು ಕೈಗೊಳ್ಳಲಾಗಿದ್ದ ವಿದೇಶಿ ಪ್ರಯಾಣಗಳ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಸಿಐಡಿ (Criminal Investigation Department) ಬೆಂಗಳೂರು, ವತಿಯಿಂದ ವಿಚಾರಣೆಗೆ ವಹಿಸಿ ಆದೇಶಿಸಿದೆ. ಈ ವಿಚಾರಣೆಯನ್ನು ನಡೆಸಲು ಸಂಬಂಧಪಟ್ಟ ಇಲಾಖೆಗಳು ಸಿಐಡಿ (Criminal Investigation Department) ಬೆಂಗಳೂರು, ಸಂಸ್ಥೆಗೆ ಸಂಪೂರ್ಣ ಸಹಕಾರ ಮತ್ತು ಅವಶ್ಯಕ ಮಾಹಿತಿ /ದಾಖಲಾತಿಗಳನ್ನು ಸಹ ಒದಗಿಸುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. ಅವರನ್ನು ಡಿ.ಆರ್.ಐ. ಅಧಿಕಾರಿಗಳು ವಶಕ್ಕೆ ಕೇಳದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.ರನ್ಯಾ ರಾವ್ ಬಳಿ ಒಟ್ಟು 14.8 ಕೆಜಿ ಚಿನ್ನ ಸಿಕ್ಕಿರುವ ಮಾಹಿತಿ ಇದ್ದು ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ ಚಿನ್ನದ ಅಕ್ರಮ ಸಾಗಣೆ ಪ್ರಕರಣ ಎನ್ನಲಾಗಿದೆ. ರನ್ಯಾ ರಾವ್ ಡಿಜಿಪಿ ಡಾ. ಕೆ. ರಾಮಚಂದ್ರರಾವ್ ಅವರ ಮಲಮಗಳಾಗಿದ್ದಾರೆ.
