ಬೆಂಗಳೂರು : ಅತ್ತೆ ಸಾಯ್ಸೋಕೆ ಮಾತ್ರೆ ಕೊಡಿ ಎಂದು ಬೆಂಗಳೂರಲ್ಲಿ ವೈದ್ಯರಿಗೆ ಮೆಸೇಜ್ ಮಾಡಿದ್ದ ಸೊಸೆ ಅರೆಸ್ಟ್ ಆಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಸಹನಾ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿ ವಾಸವಾಗಿರುವ ಸಹನಾಗೆ ಮದುವೆಯಾಗಿ ಒಂದೂವರೆ ವರ್ಷದ ಮಗು ಕೂಡ ಇದೆ. ಈಕೆಯೇ ಅತ್ತೆಯನ್ನು ಕೊಲ್ಲಲು ಮಾತ್ರೆ ಕೇಳಿದ್ದ ಸೊಸೆ. ಬೆಂಗಳೂರಿನ ಸಂಜನಯನಗರ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಮಹಿಳೆ ಹೇಳಿಕೆ ನೀಡಿದ್ದು, ತಾನೇ ಸಾಯೋದಕ್ಕೆ ಮಾತ್ರೆ ಕೇಳಿರುವುದಾಗಿ ಹೇಳಿದ್ದಾಳೆ. ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಿನ್ನೆ ವರದಿಯಾಗಿದ್ದು, ಅತ್ತೆಯನ್ನು ಕೊಲ್ಲಲು ಸೊಸೆಯೇ ವೈದ್ಯರ ಬಳಿ ಮಾತ್ರೆ ಕೇಳಿದ್ದಳು.ಅತ್ತೆಯನ್ನು ಕೊಲ್ಲಲು ನಿರ್ಧರಿಸಿದ ಸೊಸೆ ವೈದ್ಯರೊಬ್ಬರಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದಾರೆ. ನನಗೆ ಅತ್ತೆ ಬಹಳ ಕಿರುಕುಳ, ಹಿಂಸೆನೀಡುತ್ತಾರೆ. ಅವರಿಗೆ ವಯಸ್ಸಾಗಿದ್ದು, ಅವರನ್ನು ಕೊಲ್ಲುವುದು ಹೇಗೆ..? ಈ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ವೈದ್ಯರಿಗೆ ಸೊಸೆ ಮೆಸೇಜ್ ಮಾಡಿದ್ದರು.
ಮೆಸೇಜ್ ನೋಡಿ ಶಾಕ್ ಆದ ವೈದ್ಯರು ಬುದ್ದಿವಾದ ಹೇಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಡಾಕ್ಟರ್ ಬುದ್ದಿವಾದ ಹೇಳುತ್ತಿದ್ದಂತೆ ಸೊಸೆ ಮೆಸೇಜ್ ಡಿಲೀಟ್ ಮಾಡಿದ್ದಾರೆ. ತಕ್ಷಣ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ ವೈದ್ಯರು ಪೊಲೀಸರಿಗೆ ಕಳುಹಿಸಿ ವಿಚಾರ ತಿಳಿಸಿದ್ದರು.