ನವದೆಹಲಿ: ಕ್ಷೇತ್ರದ ಜನ ಕೆಲಸ ಕಾರ್ಯಗಳಿಗಾಗಿ ನನ್ನನ್ನು ಭೇಟಿಯಾಗಲು ಬರುವಾಗ ಆಧಾರ್ ಕಾರ್ಡ್ ತರಬೇಕು ಎಂದು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಕ್ಷೇತ್ರದ ಜನ ಸೇರಿದಂತೆ ನನ್ನನ್ನು ಭೇಟಿಯಾಗಲು ಬರುವ ಜನರಿಗೆ ಉಂಟಾಗುವ ಅನಾನುಕೂಲತೆ ತಪ್ಪಿಸುವ ಉದ್ದೇಶದಿಂದ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು. ಅಗತ್ಯವಿದ್ದಲ್ಲಿ ಆಧಾರ್ ಕಾರ್ಡ್ ತೋರಿಸಬೇಕು ಎಂದು ತಿಳಿಸಿದ್ದಾರೆ.
ಭೇಟಿಗೆ ಬರುವಾಗ ಯಾವ ಉದ್ದೇಶ, ಯಾವ ಕೆಲಸ ಕಾರ್ಯ ಮತ್ತು ಹೆಸರನ್ನು ಪತ್ರದಲ್ಲಿ ಬರೆದುಕೊಂಡು ಬರಬೇಕು. ಇದರಿಂದ ಅನಗತ್ಯ ವಿಳಂಬ, ಜನಸಂದಣಿ ಕಿರಿಕಿರಿ ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಹಿಮಾಚಲ ಪ್ರದೇಶ ಲೋಗೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ತಿರುಗೇಟು ನೀಡಿದ್ದು, ನನ್ನ ಭೇಟಿಗೆ ಯಾವುದೇ ಪ್ರದೇಶದ ನಾಗರೀಕರು ಬರಬಹುದು. ಆಧಾರ್ ಕಾರ್ಡ್ ತರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.